ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದು ಅವಮಾನ ಮಾಡಿರುವ ಪ್ರಕರಣ ನ್ಯಾಯಾಂಗ ವ್ಯವಸ್ಥೆಯ ಮೇಲೆ ದಾಳಿ ಹಾಗೂ ಇದು ಪ್ರತಿ ದಲಿತನ ಮೇಲಿನ ದೌರ್ಜನ್ಯ ಎಂದು ಆಮ್ ಆದ್ಮಿ ಪಾರ್ಟಿಯ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಖಂಡಿಸಿದ್ದಾರೆ.
“ಈ ಘಟನೆಯು ಪ್ರತಿ ದಲಿತನ ಗೌರವ ಮತ್ತು ನ್ಯಾಯದ ಹಕ್ಕನ್ನು ಧಿಕ್ಕರಿಸುವ ದೌರ್ಜನ್ಯವಾಗಿದ್ದು, ಬಿಜೆಪಿ ಸರ್ಕಾರದಿಂದ ನ್ಯಾಯದ ಧ್ವನಿಯನ್ನು ಮುಚ್ಚುವ ಪ್ರಯತ್ನವೆಂದು ಆಮ್ ಆದ್ಮಿ ಪಾರ್ಟಿ (ಆಪ್) ಖಂಡಿಸುತ್ತದೆ. ಈ ಘಟನೆಯು ದಲಿತ ಸಮುದಾಯದ ಮೇಲಿನ ಸಾಂಸ್ಥಿಕ ದೌರ್ಜನ್ಯದ ಭಾಗವಾಗಿದ್ದು, ನ್ಯಾಯಾಂಗದ ಸ್ವತಂತ್ರತೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ. ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ದಲಿತ ಹಿನ್ನೆಲೆಯಿಂದ ಬಂದು, ನ್ಯಾಯದ ರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವಾಗ, ಇಂತಹ ದಾಳಿ ಎಲ್ಲರ ಮೇಲಿನ ದಾಳಿಯಾಗಿದೆ. ಆಮ್ ಆದ್ಮಿ ಪಾರ್ಟಿ ರಾಜ್ಯಾದ್ಯಂತ ನಡೆಯುತ್ತಿರುವ ಬಂದ್ನಲ್ಲಿ ಭಾಗವಹಿಸಿ, ಈ ಷಡ್ಯಂತ್ರಕ್ಕೆ ತೀವ್ರ ವಿರೋಧವನ್ನು ನೀಡುತ್ತೇವು. ಇದು ಕೇವಲ ವಿಜಯಪುರಕ್ಕೆ ಸೀಮಿತವಲ್ಲ, ದೇಶಾದ್ಯಂತ ನ್ಯಾಯ ಮತ್ತು ಸಮಾನತೆಗಾಗಿ ಒಂದು ಜಾಗೃತಿ ಚಳವಳಿಯಾಗಲಿ” ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಜಯಪುರ | ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮನವಿ
“ಆಮ್ ಆದ್ಮಿ ಪಕ್ಷದ ವಿಜಯಪುರ ಘಟಕವು ಈ ಘಟನೆಯನ್ನು ಖಂಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕ್ಷಮೆಯೊಂದಿಗೆ ತನಿಖೆ ನಡೆಸಲು ಮತ್ತು ದೋಷಿಗಳನ್ನು ತಡೆಹಿಡಿಯಲು ಕರೆ ನೀಡುತ್ತದೆ. ನ್ಯಾಯಾಂಗದ ಮೇಲಿನ ದಾಳಿಗಳು ಮುಂದುವರಿದರೆ, ದೇಶದ ಜನತೆಗೆ ನ್ಯಾಯ ದೊರಕದಂತಾಗುತ್ತದೆ. ಆಮ್ ಆದ್ಮಿ ಪಕ್ಷ ಎಲ್ಲಾ ಪಕ್ಷಗಳು, ಸಮಾಜದ ಎಲ್ಲಾ ವರ್ಗಗಳನ್ನು ಈ ಹೋರಾಟಕ್ಕೆ ಸೇರಲು ಆಹ್ವಾನಿಸುತ್ತದೆ” ಎಂದು ಆಗ್ರಹಿಸಿದರು.





