ಬೆಳೆ ಹಾನಿಯ ಜಿಪಿಎಸ್ ಮಾಡುವವರು ತುಂಬಾ ಬೇಜವಾಬ್ದಾರಿಯ ಕೆಲಸ ಮಾಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸುವ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಹಿರೇಗೌಡ ಆಗ್ರಹಿಸಿದರು.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
“ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಾಗಿ ರೈತರ ಬೆಳೆಗಳು ಸಂಪೂರ್ಣ ನಷ್ಟಕ್ಕೀಡಾಗಿವೆ. ಸರ್ಕಾರದ ಇಲಾಖೆಗಳು ಕೇವಲ ಹೆಚ್ಚು ಹಾನಿಯಾದ ಬೆಳೆಗಳನ್ನಷ್ಟೇ ಪರಿಗಣನೆ ಮಾಡುತ್ತಿವೆ. ಸರಕಾರ ತಕ್ಷಣವೇ ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ವಿಮಾ ಕಂಪನಿಗಳು ಕೆಲವು ಕಡೆ ಭ್ರಷ್ಟಾಚಾರದಲ್ಲಿ ತೊಡಗಿವೆ ಎಂಬ ಆರೋಪ ಇದೆ. ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದರು.
“2024-25ನೇ ಸಾಲಿನಲ್ಲಿ ದ್ರಾಕ್ಷಿ ಬೆಳೆ ವಿಮೆ ತುಂಬಿದಂತಹ ರೈತರಿಗೆ ಇದುವರೆಗೂ ಸರ್ಕಾರದಿಂದಗಲೀ, ವಿಮಾ ಕಂಪನಿಯಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. 2024-25ನೇ ಸಾಲಿನಲ್ಲಿ ಹವಮಾನ ವೈಪರೀತ್ಯದಿಂದ ದ್ರಾಕ್ಷಿ ಇಳುವರಿಯಲ್ಲಿ ಕುಂಠಿತವಾಗಿದೆ. ಆದಕಾರಣ ತಕ್ಷಣವೇ ಪರಿಹಾರ ಕೊಡಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಪರಿಹಾರ ನೀಡದೇ ಭೂ ಕಬಳಿಕೆ ಮಾಡಿದ ಅಧಿಕಾರಿಗಳ ವಜಾಕ್ಕೆ ರೈತರ ಆಗ್ರಹ
“ಪ್ರತಿ ಟನ್ ಕಬ್ಬಿನ ಬೆಲೆಯನ್ನು 4000 ರೂಗಳಿಗೆ ಸರ್ಕಾರ ನಿಗದಿಗೊಳಿಸಬೇಕು. ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲಿ ಸಕ್ಕರೆ ಕಾರ್ಖಾನೆಗಳ ಮೇಲೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ರೈತಪರ ಆಡಳಿತ ಮಾಡುವುದಾದರೆ ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕು. ಸಹಕಾರ ಸಂಘಗಳಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ರೈತರು ಉಳಿದರೆ ದೇಶ ಉಳಿಯುವುದು, ಇಲ್ಲದ ಹೋದರೆ ಇಡೀ ದೇಶವೇ ಹಸಿವಿನಿಂದ ನರಳಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ನೂರಾರು ರೈತ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು.





