ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಇಂದಿನ ಕಾಲಘಟ್ಟದಲ್ಲಿ ಆತ್ಮರಕ್ಷಣೆಯ ಕಲೆಯನ್ನು ಅನಿವಾರ್ಯವಾಗಿ ಕಲಿಯಬೇಕು, ಅದು ಅಗತ್ಯವೂ ಹೌದು ಎಂದು ವಿಜಯಪುರ ಮಹಿಳಾ ವಿವಿಯ ಹಿಂದಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ನಾಮದೇವಗೌಡ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ಕ್ರೀಡಾ ನಿರ್ದೇಶನಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ʼಪಿ ಎಂ ಉಷಾʼ ಯೋಜನೆಯಡಿಯಲ್ಲಿ ʼಆತ್ಮರಕ್ಷಣಾ ತರಬೇತಿ ಕಾರ್ಯಾಗಾರʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ಮಾತನಾಡಿ, “ವಿದ್ಯಾರ್ಥಿಗಳು ಆತ್ಮರಕ್ಷಣೆಯ ಕಲೆಯನ್ನು ಅಳವಡಿಸಿಕೊಳ್ಳುವುದರಿಂದ ಆತ್ಮವಿಶ್ವಾಸದೊಂದಿಗೆ ಸಾಮಾಜಿಕವಾಗಿ ಸದೃಢರಾಗಲು ಸಾಧ್ಯವಿದೆ” ಎಂದರು.
ಕಾರ್ಯಕ್ರಮದಲ್ಲಿ ಡಾ. ಕಿರಣ ಜಿ ಎನ್ ಮಾತನಾಡಿ, “ಮಹಿಳೆಯರ ಸುರಕ್ಷತೆಗೆ ಆತ್ಮರಕ್ಷಣೆಯ ತರಬೇತಿ ಅತ್ಯಂತ ಅಗತ್ಯವಾಗಿದ್ದು, ಈ ಕೌಶಲ್ಯಗಳನ್ನು ಕಲಿಯುವುದರಿಂದ ಸುರಕ್ಷಿತ ಮತ್ತು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಪ್ರಮುಖವಾಗಿ ಸಹಕರಿಸಬಹುದು” ಎಂದು ಅಭಿಪ್ರಾಯಪಟ್ಟರು.
ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥ ಪ್ರೊ. ಹನುಮಂತಯ್ಯ ಪೂಜಾರಿ ಮಾತನಾಡಿ, “ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆಗಳ ಉದಾಹರಣೆಗಳನ್ನು ನೀಡುತ್ತಾ, ಆತ್ಮರಕ್ಷಣೆಯ ಕೌಶಲ್ಯಗಳ ಅರಿವು ಇಲ್ಲದಿದ್ದರೆ ಮಹಿಳೆಯರಿಗೆ ಗಂಭೀರ ತೊಂದರೆಗಳು ಎದುರಾಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ವಿಶ್ವವಿದ್ಯಾನಿಲಯವು ಎಲ್ಲಾ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕೌಶಲ್ಯವನ್ನು ಕಡ್ಡಾಯವಾಗಿ ಕಲಿಸುತ್ತಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ: ʼಸರ್ಕಾರಿ ಶಾಲೆʼ ಉಳಿಸುವಂತೆ AIDSO ಆಗ್ರಹ
ಕಾರ್ಯಾಗಾರದಲ್ಲಿ ಆತ್ಮರಕ್ಷಣಾ ತರಬೇತುದಾರ ದುರ್ಗೇಶ ಆಹೇರಿ, ಅಪಾಯದ ಸಂದರ್ಭದಲ್ಲಿ ಮಹಿಳೆಯರು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಹುಲಿಕಟ್ಟಿ, ಲಕ್ಷ್ಮಿ ನಾಯಕ, ಅಶ್ವಿನಿ ಆರ್.ಎಸ್ ಸೇರಿದಂತೆ ವಿಶ್ವವಿದ್ಯಾನಿಲಯದ ಸುಮಾರು 200 ವಿದ್ಯಾರ್ಥಿಗಳು ಮತ್ತು ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.





