ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲರೂ ಜಾತಿ, ಮತ, ಧರ್ಮ ಮೀರಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಕನ್ನಡ ಕೇವಲ ಭಾಷೆಯಾಗಿರದೆ ಪ್ರತಿಯೊಬ್ಬರ ಉಸಿರಾಗಿದೆ ಎಂದು ವಿಜಯಪುರದ ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದರು.
ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಲ್ಲಿ ಧರ್ಮ, ಜಾತಿಗಳನ್ನೂ ಮೀರಿದ ಬಂಧವೊಂದಿದೆ. ಅದೇ ಬಂಧದ ಆಧಾರದಲ್ಲಿ ಎಲ್ಲರೂ ಪ್ರೀತಿ ವಾತ್ಸಲ್ಯದಿಂದ ಬದುಕೋಣ” ಎಂದರು.
ಟಿನಾ ಝವಿಯರ್ ಮಾತನಾಡಿ, “ನಾನು ಬೇರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಕಳೆದ 20 ವರ್ಷದಿಂದ ಜೀವನ ನಡೆಸುತ್ತಿದ್ದೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಅಪಾರವಾದ ಪ್ರೀತಿ ಇದೆ. ನನ್ನ ರಕ್ತದಲ್ಲಿ ಸೇರಿಕೊಂಡಿದೆ ಎಲ್ಲರು ಸೇರಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋಣ” ಎಂದರು.
ಇದನ್ನೂ ಓದಿ: ವಿಜಯಪುರ | ಕರ್ನಾಟಕ ರಾಜ್ಯೋತ್ಸವ: ಸಚಿವ ಎಂ ಬಿ ಪಾಟೀಲರಿಂದ ಧ್ವಜಾರೋಹಣ
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ ಕೆವಿನ ಸಸಿಕ್ವೇರಾ ಮಾತನಾಡಿ, “ಕನ್ನಡ ಭಾಷೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಕನ್ನಡವನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಹಿರಿಯರನ್ನು ಸ್ವರಿಸಬೇಕಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಕನ್ನಡ ಭಾಷೆ ಇನ್ನು ಶ್ರೀಮಂತವಾಗಿ ಬೆಳೆಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶೋಭಾ ವಾಲಿಕಾರ,ರವಿ ಕಟ್ಟಿಮನಿ, ಶ್ರೀಕಾಂತ ಕಾಠೋಡ ಹಾಗೂ ಇತರರು ಇದ್ದರು.





