ಸ್ಥಳೀಯ ಭಾಷೆ–ಸಂಸ್ಕೃತಿಯನ್ನು ಸಂರಕ್ಷಿಸಿ, ನೈತಿಕ ಮತ್ತು ಸುಸ್ಥಿರ ಜ್ಞಾನ ಬಳಕೆಯ ಮೂಲಕ ʼವಿಕಸಿತ ಭಾರತʼ ನಿರ್ಮಾಣಕ್ಕೆ ಗ್ರಂಥಾಲಯಗಳು ದಾರಿದೀಪವಾಗಲಿವೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಯುಜಿಸಿ ಎಮೆರಿಟಸ್ ಪ್ರಾಧ್ಯಾಪಕ ಪ್ರೊ. ಸಿ ಆರ್ ಕರಿಸಿದ್ದಪ್ಪ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಸ್ಪೆಷಲ್ ಲೈಬ್ರರೀಸ್ ಅಂಡ್ ಇನ್ಫರ್ಮೇಶನ್ ಸೆಂಟರ್ಸ್ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಯಾಸ್ಲಿಕ್ ಪ್ರಾಯೋಜಿತ ʼಗ್ರಂಥಾಲಯ ದೃಷ್ಟಿಕೋನ- 2047ʼ ಎಂಬ ವಿಷಯದ ಕುರಿತ 34ನೇ ಅಖಿಲ ಭಾರತ ಸಮ್ಮೇಳನ 2025 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಂಥಾಲಯದ ಭವಿಷ್ಯದ ದೃಷ್ಟಿಕೋನ ಇಂದು ನಮ್ಮ ಆಯ್ಕೆಗಳು, ನಾಯಕತ್ವ ಗುಣಗಳು ಮತ್ತು ಪರಿವರ್ತನೆಗೆ ಅಗತ್ಯವಾದ ಧೈರ್ಯದೊಂದಿಗೆ ಆರಂಭಗೊಂಡಿದೆ. ಬದಲಾವಣೆಯನ್ನು ನಿರಂತರ ಪ್ರಕ್ರಿಯೆಯಾಗಿ ಸ್ವೀಕರಿಸಿರುವ ನಾವು ತಂತ್ರಜ್ಞಾನವನ್ನು ಮಾನವೀಯಗೊಳಿಸಿ, ನೈತಿಕ ಮೌಲ್ಯಗಳಿಗೆ ಮಹತ್ವ ನೀಡಿ, ಸಸ್ಥಿರ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದೇವೆ ಎಂದರು.
ಗ್ರಂಥಾಲಯಗಳು ಜ್ಞಾನ ವಿಸ್ತಾರಕ್ಕೆ ಮಾತ್ರವಲ್ಲದೆ ಸಮಾಜದಲ್ಲಿ ಸಂಶೋಧನಾ ಮನೋಭಾವನೆ ಬೆಳೆಸುವ ಪ್ರಮುಖ ಕೇಂದ್ರಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕಾರ್ಯನಿರ್ವಹಿಸುವ ದೃಢಸಂಕಲ್ಪ ನಮ್ಮದಲ್ಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಗ್ರಂಥಾಲಯಗಳು ಎಲ್ಲಾ ಸಂಸ್ಥೆಗಳ ಹೃದಯವಾಗಿವೆ. ಗ್ರಂಥಾಲಯಗಳು ದೇವಾಲಯ, ಚರ್ಚ್, ಮಸೀದಿಗಳಂತೆ ಸಮಾಜವನ್ನು ಸತ್ಮಾರ್ಗಕ್ಕೆ ನಡೆಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಕಾಲಾನುಕ್ರಮದಲ್ಲಿ ಅವುಗಳ ರೂಪ ಬದಲಾಗಬಹುದು, ಸ್ಥಳಾಂತರವಾಗಬಹುದು ಆದರೆ ಅವುಗಳ ಮೂಲ ಉದ್ದೇಶ ಒಂದೇ, ಜ್ಞಾನವನ್ನು ಹಂಚುವುದು ಹಾಗೂ ಬುದ್ಧಿವಂತ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು. ವ್ಯಕ್ತಿಯ ಜ್ಞಾನವಿಕಾಸ, ಮೌಲ್ಯ ಸಂವರ್ಧನೆ ಮತ್ತು ಸಮಾಜದ ಸಕಾರಾತ್ಮಕ ಪರಿವರ್ತನೆಗೆ ಗ್ರಂಥಾಲಯಗಳು ನಿರಂತರವಾಗಿ ಮಹತ್ವದ ಪಾತ್ರ ವಹಿಸುತ್ತಿವೆ” ಎಂದರು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ವಿರುದ್ಧ ಹೋರಾಟಗಾರರ ಬಂಧನ: ಬಿಡುಗಡೆಗೆ ಜನ ವೇದಿಕೆ ಸಂಘಟನೆ ಆಗ್ರಹ
ಕಾರ್ಯಕ್ರಮದಲ್ಲಿ ಪ್ರೊ. ಪಿ ಆರ್ ಗೋಸ್ವಾಮಿ, ಪ್ರೊ. ಅಭಿಜಿತ್, ಪ್ರೊ. ಎ ವೈ ಆಸುಂಡಿ, ಪ್ರೊ. ಪಿ ವಿ ಕೊಣ್ಣೂರು, ಪ್ರೊ. ಸಂಪತ್ ಕುಮಾರ, ಪ್ರೊ. ಸಂತೋಷ ಕುಮಾರ, ಪ್ರೊ. ಶ್ರೀನಿವಾಸ ರಾಘವನ್, ಪ್ರೊ. ಕೆ ಪಿ ವಿಜಯಕುಮಾರ, ಪ್ರೊ. ಎಂ ಚಂದ್ರಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಎಲ್ ಲಕ್ಕಣ್ಣವರ, ಅಯಾಸ್ಲಿಕ್ ಅಧ್ಯಕ್ಷ ಪ್ರೊ. ನರೇಂದ್ರ ಲಹ್ಕರ, ಪ್ರೊ. ಕೇಶವ್, ಪ್ರೊ. ಗವಿಸಿದ್ದಪ್ಪ ಎ, ಪ್ರೊ. ಪಿ ಜಿ ತಡಸದ, ಪ್ರೊ. ರಾಧಾಕೃಷ್ಣ, ಪ್ರೊ. ಶಾಂತಾದೇವಿ ಟಿ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಛತ್ತೀಸ್ಗಡ, ಈಶಾನ್ಯ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ತಜ್ಞರು, ಸಂಶೋಧಕರು ಹಾಗೂ ವೃತ್ತಿಪರರು, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಸದಸ್ಯರು, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.





