ವಿಜಯಪುರ ಜಿಲ್ಲೆಯಲ್ಲಿ 10 ಸಕ್ಕರೆ ಕಾರ್ಖಾನೆಗಳಿದ್ದು, ಕೇವಲ ಒಂದು ಕಾರ್ಖಾನೆ ಮಾತ್ರ ದರ ನಿಗದಿಪಡಿಸಿದ್ದು, ಇನ್ನುಳಿದ ಕಾರ್ಖಾನೆಗಳು ಶೀಘ್ರ ದರ ನಿಗದಿಪಡಿಸಿ ಕಾರ್ಯಾರಂಭ ಮಾಡುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಕೆ ಆನಂದ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಎರಡು ದಿನಗಳಲ್ಲಿ ಕಬ್ಬಿನ ಸಾಗಾಣಿಕೆ ಮತ್ತು ಕಟಾವು ದರ ಹೊರತುಪಡಿಸಿ ರೈತರಿಗೆ ಪಾವತಿಸಬೇಕಾಗುವ ದರವನ್ನು ನಿಗದಿಗೊಳಿಸಿ, ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು. ರೈತರಿಗೆ ಪಾವತಿಯಾಗಬೇಕಾದ ಈ ಹಿಂದಿನ ಯಾವುದೇ ಬಿಲ್ಲುಗಳನ್ನು ಬಾಕಿ ಉಳಿಸಿಕೊಳ್ಳದೆ ಶೀಘ್ರವಾಗಿ ಇತ್ಯರ್ಥಪಡಿಸಿ ಪಾವತಿಗೆ ಕ್ರಮವಹಿಸಬೇಕು. ಈ ಹಂಗಾಮಿನಲ್ಲಿ ಸರ್ಕಾರದ ಮಾನದಂಡವನ್ನು ಬಳಸಿಕೊಂಡು ತಮ್ಮ ಕಾರ್ಖಾನೆಯ ವತಿಯಿಂದ ಕಬ್ಬುನುರಿಸುವ ಕುರಿತು ಪತ್ರ ನೀಡಿ ಕಾರ್ಖಾನೆಗಳನ್ನು ಆರಂಭಿಸಬೇಕು” ಎಂದು ಸೂಚನೆ ನೀಡಿದರು.
“ರೈತ ಮುಖಂಡರು ತಮ್ಮ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಬಹುತೇಕ ಸ್ಥಳೀಯವಾಗಿರುವ ಸಮಸ್ಯೆ ಪರಿಹರಿಸಲಾಗುವುದು. ವಾಯು ಮಾಲಿನ್ಯ, ನೈರ್ಮಲ್ಯ ಪರಿಶೀಲನೆ ನಡೆಸಿದ ವರದಿ ಸಲ್ಲಿಸಿ, ಸಕ್ಕರೆ ಕಾರ್ಖಾನೆಗಳು ಕೊಳಚೆ ನೀರು ಹರಿ ಬಿಡದಂತೆ ನೋಡಿಕೊಂಡು ಮಾಲಿನ್ಯವಾಗದಂತೆ ನಿಗಾ ವಹಿಸಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಕರ್ನಾಟಕ ರಾಜ್ಯೋತ್ಸವ: ಸಚಿವ ಎಂ ಬಿ ಪಾಟೀಲರಿಂದ ಧ್ವಜಾರೋಹಣ
“ರೈತರು ಕಬ್ಬು ಪೂರೈಸಿದ ನಿಗದಿತ ಕಾಲಾವಧಿಯೊಳಗೆ ರೈತರಿಗೆ ಕಬ್ಬಿನ ಬಿಲ್ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿದಿನ ಕಾರ್ಖಾನೆಗೆ ಬರುವ ಕಬ್ಬು ತುಂಬಿದ ವಾಹನಗಳ ಕುರಿತು ಮಾಹಿತಿ ಲಾಗ್ ಬುಕ್ಕಿನಲ್ಲಿ ದಾಖಲಿಸಬೇಕು. ಕಬ್ಬಿನ ಕಾಸ್ಟ್ ಆಫ್ ಕಲ್ಟಿವೇಶನ್ ಲಾಭಾಂಶ ಕುರಿತು 15 ಅಂಶಗಳ ಕಬ್ಬಿಣ ದರ ನಿಗದಿಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಕಾರ್ಖಾನೆಗಳ ಮಾಲೀಕರು ಒಂದು ನಿಖರತೆಯಿಂದ ದರ ನಿಗದಿಪಡಿಸಿ ಘೋಷಿಸಿ ಕಾರ್ಖಾನೆ ಆರಂಭಿಸಬೇಕು” ಎಂದರು.





