ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದಲ್ಲಿ ಎಳವಾರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಭಿವೃದ್ಧೀಕರಣ ನೆಪದಲ್ಲಿ ತೆರವುಗೊಳಿಸಿದ 143ಕ್ಕೂ ಹೆಚ್ಚು ಮನೆಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಶೋಕ್ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 30ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮುಖಂಡರಾದ ಡಾ.ಪ್ರಭುಗೌಡ ಲಿಂಗದಳ್ಳಿ, ಅಶೋಕ ಗೌಡ ಪಾಟೀಲ ಮಾತನಾಡಿ, “ಕುದುರೆ ಸಾಲವಾಡಗಿ ಗ್ರಾಮದ ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರ ಹೋರಾಟಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ನಿರಂತರವಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ. ಇದರಲ್ಲಿ ಯಾರ ಮೇಲಿನ ದ್ವೇಷವಾಗಲೀ, ರಾಜಕೀಯವಾಗಲಿ ಇಲ್ಲ. ಬಡವರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಉದ್ದೇಶ ನಮ್ಮದು. ಈ ಬಡವರು ತಮ್ಮ ಮನೆಗಳನ್ನು ಕಳೆದುಕೊಂಡು ಎರಡು ತಿಂಗಳು ಗತಿಸಿ ಹೋಗಿವೆ. ಕಳೆದ 29 ದಿನಗಳಿಂದ ನಿರಾಶ್ರಿತರು ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಅಧಿಕಾರಿಗಳು ನ್ಯಾಯ ಕೊಡಿಸದೆ ಇರುವುದು ನೋವಿನ ಸಂಗತಿ. ಬಡವರ ಮನೆಗಳನ್ನು ಅನ್ಯಾಯವಾಗಿ ತೆರವುಗೊಳಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು” ಎಂದು ಆಗ್ರಹಿಸಿದರು.
ರೈತ ಮುಖಂಡ ಅರವಿಂದ ಕುಲಕರಣಿ, “ಕಾನೂನುಬಾಹಿರವಾಗಿ ನೂರಾರು ಬಡವರ ಮನೆಗಳನ್ನು ತೆರವುಗೊಳಿಸಲಾಗಿದೆ. ನಿರಾಶ್ರಿತರು ತಮಗೆ ನ್ಯಾಯ ಸಿಗಬೇಕೆಂದು ಕಳೆದ ಹಲವಾರು ದಿನಗಳಿಂದ ಧರಣಿ ಸತ್ಯಾಗ್ರಹ, ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ. ಇಂದಿನಿಂದ ಮೂರು ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹ ಮಾಡಲು ಇಬ್ಬರು ನಿರಾಶ್ರಿತರು ಮುಂದಾಗುತ್ತಿದ್ದಾರೆ. ಸರ್ಕಾರ ಇದಕ್ಕೂ ಸ್ಪಂದಿಸದೆ ಹೋದರೆ ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. ಈ ವೇಳೆಯಲ್ಲಿ ನಿರಾಶ್ರಿತರಿಗೆ ಯಾವುದೇ ಪ್ರಾಣ ಹಾನಿ ಆದರೆ ಸಂಬಂಧಿಸಿದ ಕ್ಷೇತ್ರದ ಶಾಸಕರು, ಲೋಕಪಯೋಗಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರರಾಗುತ್ತಾರೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | ಕಬ್ಬು ದರ ನಿಗದಿ ಕೇಂದ್ರದ ಅಧಿಕಾರ; ರಾಜ್ಯದ್ದು ಜಾರಿಯ ಕೆಲಸ: ಸಚಿವ ಎಂ ಬಿ ಪಾಟೀಲ್
ಧರಣಿಯಲ್ಲಿ ಅರವಿಂದ ಸಜ್ಜನ, ಶಾಂತಗೌಡ ಪಾಟೀಲ, ಬಿ ಎಂ ದೇಸಾಯಿ,ಹಸನ್ಸಾಬ ಡವಳಗಿ, ನಜೀರ್ ಪಟೇಲ್ ಗುಡ್ನಾಳ, ಬಾಬು ನದಾಫ್, ಅಲ್ತಾಫ್ ಅತ್ತಾರ್, ಮಲ್ಲಪ್ಪ ಜೇವರ್ಗಿ, ದಾವಲಸಾಬ ಅತ್ತಾರ, ಡಿಎಸ್ಎಸ್ ಮುಖಂಡರಾದ ಗುರು ಗುಡಿಮನಿ, ಕಾಮೇಶ ಭಜಂತ್ರಿ,ಯಮನೂರಿ ಚಲವಾದಿ, ಬಸವರಾಜ ದೊಡ್ಡಮನಿ,ಅಜರತಬಿ ಅತ್ತಾರ, ಶಕೀನಾ ಯಲಗಾರ, ಪವಡಪ್ಪ ಇಂಗಳಗಿ, ಚಂದ್ರಕಾಲ ಕಳ್ಳಿಮನಿ, ಬಸ್ಸಮ್ಮ ತಮದಡ್ಡಿ, ಶೀಲಾ ಕಳ್ಳಿಮನಿ, ಮಲ್ಲಮ್ಮ ಬೆಳ್ಳಗೋಳ, ಮನೆರ ಬೇಗಂ ಅತ್ತಾರ, ಬಿಬಹಜರತ್ ನಾಯ್ಕೋಡಿ ಭಾಗವಹಿಸಿದ್ದರು.





