ಸಮಾಜದಲ್ಲಿರುವ ಕೆಡುಕುಗಳನ್ನು ನಿರ್ಮೂಲನೆಗೊಳಿಸಿ ಒಳಿತನ್ನು ಸಂಸ್ಥಾಪಿಸುವುದು ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ. ಈ ಕೆಲಸವನ್ನು ಅವರು ಸಂಘಟಿತರಾಗಿ ಮಾಡಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ. ಮೊಹಮ್ಮದ್ ಸಾದ್ ಬೆಳಗಾಮಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಟಿಪ್ಪು ನಗರದಲ್ಲಿರುವ ಆಲಾ ಮಸೀದಿ ಸಭಾಂಗಣದಲ್ಲಿ ಜಮಾತೆ ಇಸ್ಲಾಮೀ ಹಿಂದ್ ನಗರ ಶಾಖೆಯಿಂದ ಹಮ್ಮಿಕೊಂಡಿದ್ದ ಮುಸ್ಲಿಂ ಸಮಾಜದ ಗಣ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪ್ರಸ್ತುತದಲ್ಲಿ ನಮ್ಮ ಸಮಾಜದಲ್ಲಿ ಸಾಮಾಜಿಕ ಕೆಡುಕುಗಳಾದ ಕೋಮುವಾದ ಭ್ರಷ್ಟಾಚಾರ ನೈತಿಕ ಅಧಿಪತನ ಸ್ವಜನಪಕ್ಷಪಾತ ಧಾರ್ಮಿಕ ಅಸಹಿಷ್ಣುತೆ ಹಾಗೂ ದ್ವೇಷವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವು ದೇಶದ ಪ್ರಗತಿ ಹಾಗೂ ಶಾಂತಿಗೆ ಮಾರಕವಾಗಿವೆ. ಇವುಗಳನ್ನು ನಿರ್ಮೂಲನೆಗೊಳಿಸದೇ ಹೋದಲ್ಲಿ ಸದೃಢ ಭಾರತದ ನಿರ್ಮಾಣ ಅಸಾಧ್ಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ದೇಶದ ಹಿತ ಚಿಂತನೆ ಎಲ್ಲರ ಕರ್ತವ್ಯವಾಗಿದೆ. ಭಾರತ ಜಗತ್ತಿನಲ್ಲಿಯೇ ಶ್ರೇಷ್ಟ ಧಾರ್ಮಿಕ ಪರಂಪರೆಯನ್ನು ಹೊಂದಿದ ದೇಶವಾಗಿದೆ. ಶತ ಶತಮಾನಗಳಿಂದ ಇಲ್ಲಿ ಎಲ್ಲ ಧರ್ಮಗಳ ಜನರೂ ಕೂಡ ಪ್ರೀತಿ ಮತ್ತು ವಿಶ್ವಾಸದಿಂದ ಬದುಕುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವ ಕೆಲಸವಾಗಬೇಕು. ನಾವೆಲ್ಲರೂ ಒಂದು ನಾವೆಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ” ಎಂದರು.
“ಮುಸ್ಲಿಂ ಸಮುದಾಯ ಇಂಥ ಸಂಕೀರ್ಣ ಸಮಯದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಮುಂದೆ ಬರಬೇಕಾಗಿದೆ. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯು ಮುಸ್ಲಿಂ ಸಮುದಾಯದಲ್ಲಿ ಇದರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿದ್ಯಾರ್ಥಿಗಳಿಗೆ, ಶಾಲೆ-ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಿವಂತೆ ಎಐಡಿಎಸ್ಒ ಆಗ್ರಹ
ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಮಹಮ್ಮದ್ ತಲಹಾ ಬೆಂಗಳೂರು. ಬೆಳಗಾವಿ ವಿಭಾಗೀಯ ಸಂಚಾಲಕ ಎಂ ಐ ಬಡಗಣ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಬಿಲಾಲ ಇದ್ದರು.





