20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊರ್ತಿ ಗ್ರಾಮದ ರಸ್ತೆ ವ್ಯಾಪಾರ ವಹಿವಾಟಿಗೂ ಕೇಂದ್ರಬಿಂದುವಾಗಿದೆ. ಸುತ್ತಲಿನ ಹಲವಾರು ಹಳ್ಳಿ ಮಂದಿ ಇಲ್ಲಿ ವ್ಯಾಪಾರ, ವಹಿವಾಟಿಗೆ ಬರುತ್ತಾರೆ. ಅಲ್ಲದೆ ಇಂಡಿ, ವಿಜಯಪುರ, ಸೋಲಾಪುರ, ಜಿಗಜೇವಣಗಿ, ಚಡಚಣ ಪಂಡರಪುರ, ನಿಂಬಾಳ, ಹಳೆಗುಣಿಕಿ ಸೇರಿದಂತೆ ಮುಂತಾದ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೋರ್ತಿ ಬಸ್ ನಿಲ್ದಾಣ ಸಮಸ್ಯೆ ಆಗರವಾಗಿದೆ. ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು ರಸ್ತೆ ಮೇಲೆ ನಿಲ್ಲುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 52ರ ವಿಜಯಪುರ-ಸೋಲಾಪುರ ರಸ್ತೆಯಲ್ಲಿರುವ ಈ ಗ್ರಾಮ 21,000 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿನ ರೇವಣಸಿದ್ದೇಶ್ವರನ ದರ್ಶನ ಪಡೆಯಲು ನಿತ್ಯ ಪಟ್ಟಣ, ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣದ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಇವರೆಲ್ಲರೂ ರಸ್ತೆ ಪಕ್ಕದಲ್ಲಿಯೇ ನಿಂತು ಬಸ್ಸಿಗೆ ಕಾಯುವ ದುಃಸ್ಥಿತಿ ಎದುರಾಗಿದೆ.
“ಬಸ್ ತಂಗುದಾಣವಿಲ್ಲದ ಕಾರಣ ಯಾವ ಬಸ್ಸು ಎಲ್ಲಿಗೆ ಹೋಗುತ್ತದೆ ಎಂಬುದು ಗ್ರಾಮೀಣ ಜನರಿಗೆ ತಿಳಿಯುತ್ತಿಲ್ಲ. ಬರುವ ಎಲ್ಲ ಬಸ್ಸುಗಳಿಗೂ ಕೈ ಮಾಡುವಂತಾಗಿದೆ. ನಿಲ್ಲಿಸಿದ ಬಸ್ಗೆ ಹತ್ತಿ ಹೋಗಬೇಕು, ಎಲ್ಲ ರಸ್ತೆಯಲ್ಲಿ ನಿಂತು ಹೈರಾಣಾಗಬೇಕಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಈ ರಸ್ತೆ ಮೂಲಕವೇ ಓಡಾಡುತ್ತಾರೆ. ಆದರೂ ನಿಲ್ದಾಣ ನಿರ್ಮಾಣಕ್ಕೆ ಕೈಗೊಂಡಿಲ್ಲ. ಬಿಸಿಲು, ಚಳಿ ಹಾಗೂ ಮಳೆಯಲ್ಲಿ ಚಿಕ್ಕಮಕ್ಕಳು, ತಾಯಂದಿರು, ವೃದ್ಧರು, ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿ ನಿಂತು ಬಸ್ಸಿಗೆ ಕಾಯುವಂತಾಗಿದೆ. ಆದ್ದರಿಂದ ಶಾಸಕರು ಶೀಘ್ರವೇ ಎಚ್ಚೆತ್ತುಕೊಂಡು ಬಸ್ ನಿಲ್ದಾಣ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು” ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

“ನನಗ 70 ವಯಸ್ಸು ಆದವು, ಹೊರ್ತಿಗೆ ಹೋಗಬೇಕೆಂದರ ನೂರು ಸಲ ಯೋಚನೆ ಮಾಡಂಗಾ ಆಗಿದೆ. ಯಾಕೆಂದರೆ ಕೂತುಕೊಳ್ಳಲು ಸ್ಥಳವಿಲ್ಲ. ನನಗ ನಿಲ್ಲಕಾಗಲ್ಲ. ನಮ್ಮಂಥವರು ಗೋಳು ಕೇಳೋರ್ಯಾರು ಸರ್” ಎನ್ನುತ್ತಾರೆ ಯಮನಪ್ಪ.
“ನಿಲ್ದಾಣಕ್ಕೆ ಮೂರು ಗುಂಟೆ ಜಾಗ ಇದೆ. ಇಷ್ಟು ಜಾಗದಲ್ಲಿ ಬಸ್ ನಿಲ್ದಾಣ ಆಗುವುದಿಲ್ಲ. ಇನ್ನು ಹೆಚ್ಚುವರಿ ಜಾಗ ಸಿಕ್ಕರೆ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ” ಎನ್ನುತ್ತಾರೆ ಗ್ರಾಮಾಡಳಿತ ಅಧಿಕಾರಿ ಮಹೇಶ ನಾಯಕ.

“ಇಂಡಿ ತಾಲೂಕಿನಲ್ಲಿ ಹೊರ್ತಿ ದೊಡ್ಡ ಗ್ರಾಮವಾಗಿದೆ. ವ್ಯಾಪಾರ ವಹಿವಾಟುಗಳಲ್ಲಿ ಮುಂಚೂಣಿಯಲ್ಲಿದೆ. ಪ್ರಸಿದ್ಧವಾದ ರೇವಣಸಿದ್ದೇಶ್ವರ ದೇವಸ್ಥಾನವಿದೆ. ಭಕ್ತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಬೇಕು” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭುವನೇಶ್ವರಿ ಕಾಂಬಳೆ.
“ಪ್ರಯಾಣಿಕರು ನಿಲ್ಲಲು, ಕುಳಿತುಕೊಳ್ಳಲು ಸೂಕ್ತ ಸ್ಥಳವಿಲ್ಲ. ಕುಡಿಯುವ ನೀರು, ಮೂತ್ರಾಲಯದ ವ್ಯವಸ್ಥೆ ಕೂಡ ಇಲ್ಲದ್ದರಿಂದ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಒಂದೊಂದು ಸಮಯದಲ್ಲೂ ಬಸ್ಸುಗಳು ನಿಲ್ಲದೆ ಹಾಗೆಯೇ ಹೋಗುತ್ತವೆ. ಬಸ್ ನಿಲ್ದಾಣವಾದರೆ ಪ್ರಯಾಣಿಕರು ತಮ್ಮ ತಮ್ಮ ಊರುಗಳ ಬಸ್ಸಿಗೆ ಹತ್ತಿ ನೆಮ್ಮದಿಯಿಂದ ಹೋಗಬಹುದು. ಆದರೆ ಈಗ ರಸ್ತೆಯಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ಪ್ರತಿ ಸೋಮವಾರ ಗ್ರಾಮದಲ್ಲಿ ಬೃಹತ್ ಸಂತೆ ನಡೆಯುತ್ತದೆ. ಬಸ್ ಹತ್ತಲು ಪ್ರಯಾಣಿಕರ ನೂಕುನುಗ್ಗಲು ಒಮ್ಮೊಮ್ಮೆ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತವೆ. ಆದ್ದರಿಂದ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಬಸ್ ನಿಲ್ದಾಣ ನಿರ್ಮಿಸಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊರ್ತಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದು ಕೇವಲ ಒಂದು ಸಣ್ಣ ಅನಾನುಕೂಲತೆ ಅಲ್ಲ. ಸುತ್ತಮುತ್ತಲಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಜನರ ದೈನಂದಿನ ಜೀವನದ ಘನತೆಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಯಾಗಿದೆ. ಮಕ್ಕಳು, ವೃದ್ಧರು, ರೋಗಿಗಳು ಇವರೆಲ್ಲರೂ ರಸ್ತೆ ಬದಿಯಲ್ಲಿ ಮಳೆ-ಗಾಳಿ-ಬಿಸಿಲಿನಲ್ಲಿ ನಿಂತುಕೊಂಡೇ ಬಸ್ ಹಿಡಿಯುವಂತಾಗಿದೆ. ಇದು ಕೇವಲ ತೊಂದರೆಯಲ್ಲ, ಅಪಘಾತಕ್ಕೂ ಕಾರಣವಾಗಬಹುದು ಮತ್ತು ಸುರಕ್ಷತೆಯ ಪ್ರಶ್ನೆಯೂ ಆಗಿದೆ.
ಇದನ್ನೂ ಓದಿದ್ದೀರಾ? ಉಡುಪಿ | ನೆರೆಹೊರೆಯ ಬಾಂಧವ್ಯ ಬಲಪಡಿಸಲು “ಆದರ್ಶ ನೆರೆಹೊರೆ, ಆದರ್ಶ ಸಮಾಜ” ಅಭಿಯಾನ
ಆದರೆ ಈ ಸಮಸ್ಯೆಗೆ ಪರಿಹಾರವಿದೆ. ಸ್ಥಳೀಯರೆಲ್ಲರೂ ಒಗ್ಗಟ್ಟಿನಿಂದ ಒಂದು ಅರ್ಜಿ, ಒಂದು ಗ್ರಾಮ ಸಭೆಯ ಠರಾವು, ಸ್ಥಳೀಯ ಶಾಸಕ-ಅಧಿಕಾರಿಗಳ ಮಟ್ಟದಲ್ಲಿ ಒತ್ತಡ ಹಾಕಿದರೆ ಸಾಕು, ₹4-5 ಲಕ್ಷದೊಳಗೆ ಒಂದು ಒಳ್ಳೆಯ ಬಸ್ ಶೆಲ್ಟರ್ ನಿಲ್ಲುತ್ತದೆ. ಇದು ಕೇವಲ ಕಟ್ಟಡವಲ್ಲ, ಗ್ರಾಮದ ಜನರ ಘನತೆ ಮತ್ತು ಸೌಕರ್ಯಕ್ಕೆ ಅನುಕೂಲವಾಗುತ್ತದೆ.
ಜನರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿಗಳಾಗಿರಲಿ ಅಥವಾ ಸರ್ಕಾರದ ಅಧಿಕಾರಿಗಳಾಗಿರಲಿ ಇತ್ತ ಗಮನಹರಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು




