ರಸ್ತೆ ಅಗಲೀಕರಣ ವಿರೋಧಿಸಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿದ್ದು, ಪಕ್ಷದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ರಸ್ತೆ ಅಗಲೀಕರಣ ನೆಪದಲ್ಲಿ ಗ್ರಾಮದ ಮನೆಗಳು, ಅಂಗಡಿಗಳನ್ನು ಧ್ವಂಸಗೊಳಿಸಿ ಬಡ ಕುಟುಂಬಗಳನ್ನು ಬೀದಿಗೆ ತಳ್ಳಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂ ದೇವರಹಿಪ್ಪರಗಿ ಶಾಸಕರ ವಿರುದ್ಧ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯುತ್ತಿದೆ.
“ತಾಲೂಕು ಆಡಳಿತ ಅಧಿಕಾರಿಗಳು 2 ತಿಂಗಳ ಹಿಂದೆ ಆರಂಭವಾದ ರಸ್ತೆ ಸುಧಾರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನೋಟೀಸ್ ಇಲ್ಲದೆಯೇ ಬಡ ಕುಟುಂಬಗಳ 143ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿ, ಅನಾಥರನ್ನಾಗಿ ಮಾಡಿದ್ದಾರೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು, ಜನರ ಜೀವನ ಹಕ್ಕನ್ನು ಉಲ್ಲಂಘಿಸುವ ಕೃತ್ಯವಾಗಿದೆ. ಈ ಕೃತ್ಯವು ಸ್ಥಳೀಯ ಶಾಸಕರ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತ. ಬಡವರ ಮೇಲೆ ದೌರ್ಜನ್ಯ ಮಾಡುವ ಬದಲು ಅವರಿಗೆ ನ್ಯಾಯ ಒದಗಿಸುವುದು ಶಾಸಕರ, ಜಿಲ್ಲಾ ಆಡಳಿತ ಹಾಗೂ ಸರ್ಕಾರದ ಕರ್ತವ್ಯ” ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಹೇಳಿದರು.
ಇದನ್ನೂ ಓದಿ: ವಿಜಯಪುರ | ಸರ್ಕಾರಿ ಯೋಜನೆಗಳ ಬಳಸಿಕೊಂಡು ಉದ್ಯಮಿಗಳಾಗಿ: ಡಾ. ರವೀಂದ್ರ ಬೆಳ್ಳಿಕರೆ
ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಸಂಜು ಶೆಟಗಾರ ಮಾತನಾಡಿ, “ದ್ವಂಸಗೊಳಿಸಲ್ಪಟ್ಟ ಕುಟುಂಬಗಳಿಗೆ ತಕ್ಷಣ ಸಾಂತ್ವನಾರ್ಥಕ ಪರಿಹಾರ ನೀಡಬೇಕು. ಉಚಿತ ಜಾಗ ನೀಡಿ ನೂತನ ಮನೆಗಳ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಈ ಕೃತ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಮೆಹಬೂಬ್ ಹಡಲಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವಿನಾಶ್ ಐಹೊಳೆ, ಬಸವನ ಬಾಗೇವಾಡಿ ಅಧ್ಯಕ್ಷ ಸಂತೋಷ್ ಚಲವಾದಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





