ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಖಂಡಿಸಿ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ 84ನೇ ದಿನಕ್ಕೆ ಕಾಲಿಟ್ಟಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸದಸ್ಯರು ಶಾಸಕರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಹೋರಾಟಗಾರರ ಅವಮಾನಿಸಿದ ನಗರ ಶಾಸಕರಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, “ಶಾಸಕರು ಕೂಡಲೇ ಹೇಳಿಕೆ ವಾಪಸ್ ತೆಗೆದುಕೊಂಡು ಜಿಲ್ಲೆಯ ಹೋರಾಟಗಾರರಿಗೆ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, “ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಕಳೆದ 84 ದಿನಗಳಿಂದ ವಿವಿಧ ಸಂಘಟನೆಗಳ ನಾಯಕರು ಹಾಗೂ ವಿಜಯಪುರ ಜಿಲ್ಲೆಯ ನಾಗರಿಕರು ಹೋರಾಟ ನಡೆಸುತ್ತಿದ್ದೇವೆ. ಇದನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೋರಾಟದಲ್ಲಿ ಕುಳಿತಿರುವವರನ್ನು ಶಿವಾನಂದ ಪಾಟೀಲರು ತಂದು ಕೂರಿಸಿದ್ದಾರೆ. ಅವರಿಗೆ ಸಂಜೆಯಾದ ಕೂಡಲೇ ದುಡ್ಡು ಕೊಟ್ಟು ಕಳುಹಿಸುತ್ತಾರೆ. ಹೋರಾಟದಲ್ಲಿ ಕುಳಿತಿರುವವರು ಯಾರೂ ಹೋರಾಟಗಾರರಲ್ಲವೆಂದು ಹೇಳುತ್ತಿರುವುದು ಅತ್ಯಂತ ಖಂಡನೀಯ” ಎಂದು ಅಕ್ರೋಶ ವ್ಯಕ್ತಪಡಿಸಿದರು.
“ಹೋರಾಟ ಮಾಡುವುದು ನಮ್ಮ ಹಕ್ಕು. ಇಲ್ಲಿ ಯಾರೂ ನಮ್ಮನ್ನು ಕರೆದುಕೊಂಡು ಬಂದು ಕೂರಿಸಿಲ್ಲ. ನಾವೆಲ್ಲ ದಿನಾಲೂ ಬೇರೆ ಬೇರೆ ಹಳ್ಳಿ ಮತ್ತು ಪಟ್ಟಣಗಳಿಂದ ಸ್ವಂತ ಹಣ ಖರ್ಚು ಮಾಡಿಕೊಂಡು ಬಂದು ಹೋರಾಟ ನಡೆಸುತ್ತಿದ್ದೇವೆ. ಸ್ವಇಚ್ಛೆಯಿಂದ ಹೋರಾಟ ಪ್ರಾರಂಭಿಸಿದ್ದೇವೆ. ಇಲ್ಲಿ ನಾವೆಲ್ಲರೂ ಜಿಲ್ಲೆಯ ಹಿತಾಸಕ್ತಿಗೋಸ್ಕರ ಹೋರಾಟಕ್ಕಿಳಿದಿದ್ದೇವೆ. ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕುಟಿಕಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪಾಳಾ ಗ್ರಾಮ ಪಂಚಾಯತ್ ಕರ ಸಂಗ್ರಹಣೆಯಲ್ಲಿ ಶೇ.100ರಷ್ಟು ಸಾಧನೆ
ಅನಿಲ ಹೊಸಮನಿ, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶಾಳಕರ, ಸುರೇಶ ಬಿಜಾಪುರ, ಸಿದ್ದರಾಮಯ್ಯ ಹಳ್ಳುರ, ಎಸ್ ಎಂ ಗುರಿಕಾರ, ಶ್ರೀಕಾಂತ ಕೊಂಡಗುಳಿ, ಭರತ್ ಕುಮಾರ್ ಎಚ್ ಟಿ, ಜಗದೇವ ಸೂರ್ಯವಂಶಿ, ಸಿ ಬಿ ಪಾಟೀಲ, ಸುಶೀಲ ಮಿಣಜಿಗಿ, ಜ್ಯೋತಿ ಮೆಣಜಗಿ, ಶಿವಬಾಳಮ್ಮ ಕೊಂಡಗುಳಿ, ಗೀತಾ ಎಚ್, ಶಿವರಂಜನಿ, ಕಾವೇರಿ ರಜಪೂತ, ನೀಲಾಂಬಿಕ ಬಿರಾದಾರ, ಬಾಳು ಜೇವೂರ, ಸಲಿಮ ವಕ್ರಾಣಿ ಸೇರಿದಂತೆ ಇತರರು ಇದ್ದರು.





