ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಅ.16ರಂದು ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಮುಖಂಡ ಎಸ್ ಎಂ ಪಾಟೀಲ ಗಣಿಹಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಓರ್ವ ನ್ಯಾಯಾಧೀಶರ ಮೇಲಿಗೆ ಈ ರೀತಿ ಹಲ್ಲೆ ಮಾಡಿದರೂ ಕೇಂದ್ರ ಸರ್ಕಾರ ಏಕೆ ಆರೋಪಿ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಆರೋಪಿಯ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ತಕ್ಷಣ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಅ.16 ರಂದು ಸಂವಿಧಾನದ ರಕ್ಷಣೆಗಾಗಿ ಜಾತಿ, ಪಕ್ಷ, ಧರ್ಮತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಹಿಂದುಳಿದವರು, ದಲಿತರು, ಸಾಹಿತಿಗಳು ಹಾಗೂ ಸಮಾನ ಮನಸ್ಕರು ಸಂಘಟನೆಗಳು ಭಾಗವಹಿಸಬೇಕು” ಗಣಿಹಾರ ವಿನಂತಿಸಿದರು.
“ಸಮಾಜದಲ್ಲಿ ಸಮಾನತೆಯನ್ನು ಬಯಸದ ಸನಾತನ ಹಿನ್ನೆಲೆಯವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದವರಿಗೆ ಸಮಾನತೆ ಬೇಕಾಗಿಲ್ಲ. ದೇಶದ ದಲಿತರಿಗೆ ಸ್ಥಾನಮಾನ, ಸಾಮಾಜಿಕ ನ್ಯಾಯ ಸಿಗುವುದು ಬೇಕಾಗಿಲ್ಲ. ಆರ್ ಎಸ್ ಎಸ್ ಮುಸ್ಲಿಮರನ್ನು ತೋರಿಕೆಗೆ ವಿರೋಧಿಸುತ್ತಾರೆ. ಆದರೆ ಅವರ ಅಸಲಿ ಟಾರ್ಗೆಟ್ ದಲಿತರೆ ಆಗಿದ್ದಾರೆ. ಇನ್ನು ಆರ್ ಎಸ್ ಎಸ್ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಮಾಡುವುದು ಬಂದ್ ಮಾಡಬೇಕು ಎಂದು ಸಿಎಂ ಅವರಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದಾರೆ. ಇದನ್ನೇ ಕೆಲವರು ಆರ್ ಎಸ್ ಎಸ್ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ ಎಂದು ತಿರುಚಲಾಗಿದೆ. ಆರ್ ಎಸ್ ಎಸ್ ಮೇಲೆ ಸರಿಯಾದ ಸಾಕಾದಾರಗಳನ್ನು ಸಂಗ್ರಹಿಸಿ ಬ್ಯಾನ್ ಮಾಡುತ್ತಾರೆ ಎಂದರು. ಸಂಘಟನೆ ಹುಟ್ಟಿ ನೂರು ವರ್ಷಗಳು ಪೂರೈಸಿದ್ದೀರಿ, ದೇಶಕ್ಕಾಗಿ ಏನು ಮಾಡಿದ್ದೀರಿ ಅದನ್ನು ಜನರಿಗೆ ತಿಳಿಸಬೇಕು. ಆರ್ ಎಸ್ ಎಸ್ ಸಂಘಟನೆ ಅಧಿಕೃತವಾಗಿ ನೋಂದಣಿಗೆ ಆಗಿಲ್ಲ. ಇಷ್ಟೇ ಅಲ್ಲದೆ ಕೈಯಲ್ಲಿ ಲಾಟಿ ಹಿಡಿದುಕೊಂಡು ಗಲ್ಲಿಗಳಲ್ಲಿ ಅಡ್ಡಾಡಿದರೆ ಏನು ಪ್ರಯೋಜನವಿದೆ? ಇದೆಲ್ಲವನ್ನು ದೇಶದ ಜನರಿಗೆ ಹೆದರಿಸಲು ಅವರು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವಲ್ಲಿ ಆರ್ ಎಸ್ ಎಸ್ ನವರು ಬೇಹುಗಾರಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ವಿಜಯಪುರ | ಬೆಳೆಹಾನಿ ಪರಿಹಾರಕ್ಕೆ ರೈತ ಸಂಘಟನೆಗಳ ಆಗ್ರಹ
ಬಸವ ಚಿಂತಕ ಡಾ. ಜೆ ಎಸ್ ಪಾಟೀಲ ಮಾತನಾಡಿ, “ಸಂವಿಧಾನ, ಸಾಮಾಜಿಕ ನ್ಯಾಯ ಬೆಂಬಲಿಸುವವರು ಪ್ರತಿಭಟನೆಗೆ ಬೆಂಬಲ ಕೊಡಬೇಕು. ಕನ್ನೆರಿ ಸ್ವಾಮೀಜಿ ಕಾವಿ ಪುಡಾರಿಯಾಗಿದ್ದು, ಅವರು ಸ್ವಾಮೀಜಿಯಾಗಲು ಯೋಗ್ಯರಲ್ಲ. ಲಿಂಗಾಯತ ಸಮಾಜವನ್ನು ನಾಶ ಮಾಡಲೆಂದೇ ಹುಟ್ಟಿರುವವನು ಕನ್ನೆರಿ ಸ್ವಾಮೀಜಿ” ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸನಗೌಡ ಹಾರನಾಳ, ರವಿಕುಮಾರ ಬಿರಾದಾರ, ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದರು.





