ಸರ್ಕಾರಿ, ಖಾಸಗಿ, ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯ ವೈದಿಕೀಯ ಕಾಲೇಜು ಸ್ಥಾಪನೆಯನ್ನು ವಿರೋಧಿಸಿ ವಿಜಯಪುರ ಹಾಗೂ ಕರ್ನಾಟಕ ಜನಾರೋಗ್ಯ ಚಳವಳಿ ಸಂಸ್ಥೆಯ ಸಾವಿರಾರು ಕಾರ್ಯಕರ್ತೆಯರು ಜಿಲ್ಲಾದ್ಯಂತ ರಂಗೋಲಿ ಚಳವಳಿ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ ಸರ್ಕಲ್, ಗಾಂಧಿ ಚೌಕ, ಸಿದ್ದೇಶ್ವರ ದೇವಸ್ಥಾನ, ಶಿವಾಜಿ ಸರ್ಕಲ್, ಜಿಲ್ಲಾಸ್ಪತ್ರೆ, ಜಿಲ್ಲಾ ಪಂಚಾಯತಿ ಹತ್ತಿರ ಹಾಗೂ 13 ತಾಲೂಕಿನ ಮುಖ್ಯ ವೃತ್ತದಲ್ಲಿ ರಂಗೋಲಿ ಚಿತ್ರ ಬಿಡಿಸಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜನವೇದಿಕೆ ಸಂಘಟನೆ ಹಾಗೂ ಜನಾರೋಗ್ಯ ಚಳವಳಿಯ ಮುಖ್ಯಸ್ಥೆ ಟೀನಾ ಜೇವಿಯರ್, “ಕರ್ನಾಟಕ ರಾಜ್ಯ ಸರ್ಕಾರ ತನ್ನ ಖಾಸಗಿಪರ, ಜನವಿರೋಧಿ ಆರೋಗ್ಯ ನೀತಿಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಾ ಬಂದಿದೆ. ಹೀಗೆ ಮಾಡಿ ನಮ್ಮ ಜಿಲ್ಲಾಸ್ಪತ್ರೆಯ 149 ಎಕರೆ ಭೂಮಿ, ಕಟ್ಟಡ, ಸಿಬ್ಬಂದಿ, ಸಲಕರಣೆಗಳು ಇತ್ಯಾದಿ ಒಳಗೊಂಡಂತೆ ಎಲ್ಲವನ್ನೂ ಖಾಸಗಿ ಕಂಪನಿಗಳ ತಿಜೋರಿಗೆ ಸಾಗಿಸುವ ಹುನ್ನಾರವನ್ನು ತೀವ್ರವಾಗಿ ಖಂಡಿಸುತ್ತೇವೆ. ಬಡ ಮಧ್ಯಮ ವರ್ಗದ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಉದ್ದೇಶವನ್ನು ಕೈ ಬಿಡಲು ಒತ್ತಾಯಿಸುತ್ತೇವೆ. ಖಾಸಗಿ ಆಸ್ಪತ್ರೆಯಾದರೆ ದುಡ್ಡಿದ್ದರೆ ಆರೋಗ್ಯ, ದುಡ್ಡಿದ್ದರೆ ವೈದ್ಯಕೀಯ ಶಿಕ್ಷಣ ಎಂಬಂತಾಗುತ್ತದೆ, ಆದ್ದರಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ವೇದಿಕೆ ಸಂಘಟನೆಯ ಕಾರ್ಯಕರ್ತೆ ಸುನಿತಾ ಮೋರೆ ಮಾತನಾಡಿ, “ಬಡ, ದಲಿತ, ಆದಿವಾಸಿ, ಹಿಂದುಳಿದ ಜನಾಂಗಗಳ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಈಗಿರುವ ಅಲ್ಪ ಅವಕಾಶವೂ ಕೂಡ ಕಣ್ಮರೆಯಾಗುತ್ತದೆ. ವೈದ್ಯರಾಗಬೇಕೆನ್ನುವ ನಮ್ಮ ಮಕ್ಕಳ ಕನಸು ನುಚ್ಚು ನೂರಾಗುತ್ತದೆ. ಕೇವಲ ಉಳ್ಳವರು ಮಾತ್ರ ವೈದ್ಯ ವೃತ್ತಿಗೆ ಸೇರಿ ತಾವು ಖರ್ಚು ಮಾಡಿದ ಹಣವನ್ನು ಮರು ಪಡೆದು ಲಾಭ ಗಳಿಸಲು ವೈದ್ಯಕೀಯ ಸೇವೆಯ ವ್ಯಾಪಾರಕ್ಕೆ ಇಳಿಯುವಂತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳ ಭರವಸೆ: ಧರಣಿ ಹಿಂಪಡೆದ ನಿರಾಶ್ರಿತರು
ಜನ ವೇದಿಕೆ ಮುಖಂಡರಾದ ರಾಜೇಶ್ವರಿ ಮಠಪತಿ, ಫರ್ಜನಾ ಜಮಾದಾರ, ಶ್ರೀದೇವಿ ಡೆಂಗಿ, ಕವಿತಾ ರಾಥೋಡ್, ಹಮೀದ ಪಟೇಲ್, ಭಾರತಿ ಶಿವಣಗಿ,ಅರುಣ ಬೂದಿಹಾಳ, ಮೀನಾಕ್ಷಿ ಕಾಲೆಬಾಗ, ಗೀತಾ ಹೊಸಳ್ಳಿ, ರೇಣುಕಾ ತಮ್ಮಗೊಂಡ, ಜ್ಯೋತಿ ರಾಥೋಡ, ಫಾದರ್ ಕೆವಿನ್, ಶ್ರೀಧರ ಕೊಣ್ಣೊರ, ಅಕ್ರಮ್ ಮಾಶಾಳಕರ, ಮುತ್ತು ಬೋವಿ, ದಸ್ತಗಿರಿ ಮುಲ್ಲಾ, ಭರತ್ಕುಮಾರ್ ಎಚ್ ಟಿ, ಗೀತಾ ಎಚ್, ಸುರೇಶ ಬಿಜಾಪುರ, ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಚನ್ನು ಕಟ್ಟಿಮನಿ, ಯಮನಪ್ಪ ಗುಣಿಕಿ ಇದ್ದರು.





