ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ವಿಜಯಪುರದಲ್ಲಿ ಎಸ್ಯುಸಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪರಿಷ್ಕೃತ ದರವನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಯುಸಿಐ ಮುಖಂಡ ಬಿ.ಭಗವಾನರೆಡ್ಡಿ, “ನಾವು ಜನಪರ, ಬಡವರ ಪರ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡುತ್ತಿದೆ. ಆ ಮೂಲಕ ಸಾಮಾನ್ಯ ಜನರ ಬೆನ್ನಿಗೆ ಚೂರಿ ಇರಿದಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಿಂದ ಜನರಿಗೆ ಕೊಟ್ಟು ಪೆಟ್ರೋಲ್ ದರ ಹೆಚ್ಚಳದ ಹೆಸರಲ್ಲಿ ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
“ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರಿಗೆ ತಲಾ ರೂ.3 ಏರಿಕೆ ಮಾಡಿರುವುದರಿಂದ ರಾಜ್ಯದ ಜನತೆ ರೂ.3000 ಕೋಟಿಗೂ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ದಾರೆ ಎರಿಯಬೇಕಾಗುತ್ತದೆ. ಒಮ್ಮೆ ಇಂಧನ ದರ ಹೆಚ್ಚಳವಾದರೆ ಮುಂದೆ ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಿಕೆಯಾಗುತ್ತದೆ. ಸರಕು ಸಾಗಣಿಕೆ ವೆಚ್ಚ ಹೆಚ್ಚಾದರೆ ದಿನಬಳಕೆಯ ವಸ್ತುಗಳಾದ ತರಕಾರಿ, ದವಸ, ಧಾನ್ಯಗಳ ದರವೂ ಹೆಚ್ಚಾಗುತ್ತದೆ. ಜನ ಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಯುಸಿಐ ಮುಖಂಡ ಮಲ್ಲಿಕಾರ್ಜುನ ಹೆಚ್.ಟಿ ಮಾತನಾಡಿ, “ಈ ಹಿಂದೆ ಬಿಜೆಪಿ ಸರ್ಕಾರ ದರ ಹೆಚ್ಚಳಮಾಡಿದಾಗ ಅದರ ವಿರುದ್ಧ ಮಾತನಾಡಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಈಗ ತಾವೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ಬಿಜೆಪಿ – ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಜನದ್ರೋಹಿ ಪಕ್ಷಗಳು. ಇವುಗಳವವಿರುದ್ಧ ಜನ ಬೀದಿಗಿಳಿದು ಪ್ರತಿಭಟಿಸಬೇಕು” ಎಂದರು.
ಪ್ರತಿಭಟನೆಯಲ್ಲಿ ಸಿದ್ದಲಿಂ ಬಾಗೇವಾಡಿ, ಹೆಚ್.ಟಿ. ಭರತ ಕುಮಾರ ಹಾಗೂ ಸಂಘಟನಕಾರರಾದ ಶಿವರಂಜನಿ , ಕಾವೇರಿ, ಸಿದ್ರಾಮ ಹಿರೇಮಠ್,ಪಿರಜಮಾದಾರ,ಮಹಾದೇವ ಲಿಗಾಡೆ ಮುಂತಾದವರು ಭಾಗವಹಿಸಿದ್ದರು.




