ಕಬ್ಬು ದರ ನಿಗದಿ ಮಾಡುವುದು ಕೇಂದ್ರದ ಅಧಿಕಾರ; ರಾಜ್ಯ ಸರ್ಕಾರ ಕೇವಲ ಜಾರಿಮಾಡುವುದಷ್ಟೇ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ರಾಜ್ಯ ಸರ್ಕಾರ ಕಬ್ಬಿನದರ 3300 ಘೋಷಣೆ ಮಾಡಿರುವುದರ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗ ಆಗಿರುವ ದರ ನಿರ್ಧಾರದ ಕುರಿತು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರಲ್ಲಿ ಗೊಂದಲಗಳಿವೆ. ಎಲ್ಲಾ ಕಾರ್ಖಾನೆಯವರನ್ನು ಒಪ್ಪಿಸಿ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಕಾರ್ಖಾನೆಯವರೆಲ್ಲ ಒಪ್ಪಿದ್ದಾರೆ. ಸಕ್ಕರೆ ವಿಚಾರದಲ್ಲಿ ಎಲ್ಲವೂ ಕೇಂದ್ರ ಸರ್ಕಾರದ್ದು, ಅದರಂತೆ ರೂ.3550 ಎಫ್ಆರ್ಪಿ ದರ ನಿಗದಿ ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರ ಗ್ರಾಹಕರ ಇಲಾಖೆಯ ಮಂತ್ರಿ ಯಾರು? ಪ್ರಲ್ಹಾದ್ ಜೋಶಿ. ಕಬ್ಬು ಕಟಾವು, ಸಾಗಾಟ ವೆಚ್ಚ ಸೇರಿ ಒಟ್ಟು ಕೇಂದ್ರದ ಎಫ್ಆರ್ಪಿ ಪ್ರಕಾರ 2600, 2700 ಆಗುತ್ತದೆ. ಈಗ ಎಫ್ಆರ್ಪಿ ದರಕ್ಕಿಂತ ಏಳು ನೂರು ಹೆಚ್ಚಾಗಿದೆ. ಸಕ್ಕರೆ ರಫ್ತು, ಆಮದು ಮಾಡುವ ನಿರ್ಧಾರ ಕೇಂದ್ರ ಸರ್ಕಾರವೇ ಮಾಡುತ್ತದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್ಆರ್ಪಿ ಗಿಂತ 700 ಹೆಚ್ಚು ಕೊಡಿಸಿದ್ದೇವೆ” ಎಂದರು.
“ರೈತರ ಬಗ್ಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ರೈತರ ಹೋರಾಟದಲ್ಲಿ ಬಿಜೆಪಿಯವರು ರಾಜಕೀಯ ಮಾಡಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲಿ ಹೋಗಿ ಮಲಗಿ ನಾಟಕ ಮಾಡಿದರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪ್ರಧಾನಿ ಹಾಗೂ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರ ಸಿಎಂ ಬಿಜೆಪಿಯವರು. ಎಂಎಸ್ಪಿ ಸಕ್ಕರೆ ದರ 31 ಇರೋದನ್ನು 41ಕ್ಕೆ ಏರಿಸಿ ಎಂದು ಪತ್ರ ಬರೆದಿದ್ದಾರೆ. ಸಕ್ಕರೆ ದರ ಏರಿಕೆಯಾದರೆ ರೈತರಿಗೆ ಅನುಕೂಲ ಆಗುತ್ತೆ. ನಮ್ಮ ರಾಜ್ಯದ್ದು ಎಥೆನಾಲ್ ಶೇ 70% ರಷ್ಟು ಖರೀದಿಯಾಗುತ್ತೆ. ಗುಜರಾತ್ ನಲ್ಲಿ 75% ರಷ್ಟು ಖರೀದಿ ಆಗುತ್ತದೆ” ಎಂದರು.
ವಿಜಯಪುರ ರೈತರದ್ದು ಏನಿದೆ ಅದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಜೊತೆಗೆ ಚರ್ಚಿಸುವೆ. ಅವರು ಇವತ್ತು ನಾಳೆ ಬರಬಹುದು ಅವರು ಬಂದು ವಿವರಣೆ ಕೊಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ
“ಲೋಕಸಭೆಯಲ್ಲಿ ಪ್ರಲ್ಹಾದ್ ಜೋಶಿ ಅವರು ಆಗಸ್ಟ್, ಅಕ್ಟೋಬರ್ ತಿಂಗಳಲ್ಲಿ ಉತ್ತರ ಕೊಟ್ಟ ಪ್ರತಿ ನನ್ನ ಬಳಿ ಇದೆ. ಮತ್ತೆ ಲೋಕಸಭೆಯಲ್ಲಿ ಅವರು ತಪ್ಪು ಉತ್ತರ ಕೊಡುತ್ತಿದ್ದರೆ ನನಗೆ ಗೊತ್ತಿಲ್ಲ. ಕೇಂದ್ರದ ಜವಾಬ್ದಾರಿ ಬಿಟ್ಟು ರಾಜ್ಯ ಸರ್ಕಾರದ ಮೇಲೆ ರೈತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದರು. ಕಬ್ಬು ದರ ವಿಚಾರ ರಾಜ್ಯ ಸರ್ಕಾರದಲ್ಲ ಅನ್ನೋದು ತಿಳಿದಿದೆ. ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು. ವಿಜಯೇಂದ್ರ ಅಲ್ಲಿಗೆ ಹೋಗಿ ಮಲಗಿದ್ದಾದರೂ ಯಾಕೆ? ಬಿಜೆಪಿಯವರು ರಾಜಕೀಯ ಮಾಡಿದ್ರು, ಮತ್ತೆ ಬಿಜೆಪಿಯವರ ಫ್ಯಾಕ್ಟರಿ ಇವೆ, ಇಲ್ಲವೇನು?” ಎಂದು ಪ್ರಶ್ನಿಸಿದರು.





