ಪಿಂಚಣಿ ಕಡಿತ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮತ್ತು ವಿಕಲಚೇತನರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಟ್ಟಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳುವುದೇ ಈ ಒಂದು ಬೆಂಬಲ ಸಭೆಯ ಉದ್ದೇಶವಾಗಿದೆ ಎಂದು ಶ್ರೀಮತಿ ಕಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ ಒಕ್ಕೂಟ ಹಾಗೂ ವಿಶೇಷ ಚೇತನರ ಒಕ್ಕೂಟ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೃದ್ಧರು ಹಾಗೂ ವಿಕಲಚೇತನರ ಬೆಂಬಲ ಸಭೆಯಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಂದಾಯ ಇಲಾಖೆಯ ರತನ್ ಗೋಸಾವಿ ಮತನಾಡಿ, “ಇತ್ತೀಚಿಗೆ ವಯೋವೃದ್ದರು ಮತ್ತು ವಿಕಲಚೇತನರು ಕಚೇರಿಗೆ ಬಂದು ತಮ್ಮ ಸಮಸ್ಯೆ ಬಗ್ಗೆ ತಿಳಿಸುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಈ ರೀತಿ ಸಭೆಗಳನ್ನು ಮಾಡಿ ಸಂಸ್ಥೆಗಳ ಮೂಲಕ ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದು ತುಂಬಾ ಸಂತೋಷ. ಕಾರಣ ಇಲಾಖೆಗಳಿಗೆ ಓಡಾಡುವುದು ತುಂಬಾನೇ ಕಷ್ಟಕರ. ಹೀಗಾಗಿ ಪಿಂಚಣಿಗೆ ಸಂಬಂಧಪಟ್ಟ ಏನೇ ಸಮಸ್ಯೆಗಳಿದ್ದರೂ ನಮ್ಮೊಟ್ಟಿಗೆ ಚರ್ಚಿಸಿ ಒಂದು ಪಟ್ಟಿ ಮಾಡಿ ಸಂಸ್ಥೆ ಮೂಲಕ ನಮ್ಮ ಗಮನಕ್ಕೆ ತಂದರೆ ನಾನು ಸರಿಪಡಿಸುತ್ತೇನೆ” ಎಂದು ಭರವಸೆ ನೀಡಿದರು.
“ನಾನು ಒಂದು ಬಡ ಕುಟುಂಬದಿಂದ ಬಂದಿರುವದರಿಂದ ತಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಯಾವುದೇ ರೀತಿ ಸಂಕೋಚ ಪಟ್ಟುಕೊಳ್ಳದೆ ನಾನು ನಿಮ್ಮ ಮನೆ ಮಗನೆಂದು ತಿಳಿದು ಸಮಸ್ಯೆಯನ್ನು ಪರಿಹರಿಸಿಕೊಳ್ಳಿ” ಎಂದು ತಿಳಿಸಿದರು.
ಸುಮನ್ ಬಾಲು ಅಧ್ಯಕ್ಷೀಯ ಭಾಷಣ ಮಾಡಿ, “ಈ ಸಂದರ್ಭದಲ್ಲಿ ವಿಕಲಚೇತನರು ಮತ್ತು ವಯೋವೃದ್ಧರೇ ನಮಗೆ ಮಾದರಿಯಾಗಿದ್ದಾರೆ. ಅವರನ್ನು ನೋಡಿ ನಾವು ಅವರಿಂದ ಸಾಕಷ್ಟು ವಿಷಯಗಳನ್ನು ಹಾಗೂ ಜೀವನವನ್ನು ಯಾವ ರೀತಿ ರೂಪಿಸಿಕೊಳ್ಳಬೇಕೆಂದು ಸದ್ಯದ ಯುವಜನರು ಕಲಿಯಬೇಕಾಗಿದೆ. ಇಂತಹ ಅಧಿಕಾರಿಗಳು ಸಿಗುವುದು ತುಂಬಾ ಕಡಿಮೆ. ಹೀಗಾಗಿ ನಮ್ಮ ಅವರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ” ಎಂದು ಸಲಹೆ ನೀಡಿದರು.
ವಿಜಯಪುರ ನಗರ ಒಕ್ಕೂಟ ಮತ್ತು ವಿಕಲಚೇತನರ ಒಕ್ಕೂಟದ ಮಾಸಿಕ ಬೆಂಬಲ ಸಭೆಯನ್ನು ಸಂವಿಧಾನದ ಪ್ರಸ್ತಾವನೆ ಹೇಳುವ ಮೂಲಕ ಪ್ರಾರಂಭಿಸಲಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬ; ರಾಜ್ಯ ಮತ್ತು ತೆಲಂಗಾಣ ಸಿಎಂಗಳ ಆಹ್ವಾನಕ್ಕೆ ನಿರ್ಧಾರ
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಹ ನಿರ್ದೇಶಕ ಹಾಗೂ ಕಂದಾಯ ಇಲಾಖೆಯ ರತನ್ ಗೋಸಾವಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಕಾರ್ಯ ಸಂಯೋಜಕಿ ಸಿಸ್ಟರ್ ಜಯ ಮೇರಿ, ಒಕ್ಕೂಟದ ಅಧ್ಯಕ್ಷೆ ಸುಶೀಲಾಬಾಯಿ ದಳವಾಯಿ, ಕಾರ್ಯದರ್ಶಿ ಲಾಲ್ ಸಾಬ್ ಮುಲ್ಲಾ, ವಿಕಲಚೇತನರ ಮುಖಂಡರಾದ ಮಲ್ಲಿಕಾರ್ಜುನ್, ಉಮರಾಣಿ ಮತ್ತು ಎಲ್ಲಮ್ಮ ಇದ್ದರು.





