‘ವಿಜಯಪುರದಲ್ಲಿ ಉದ್ದೇಶಿತ ಪಿಪಿಪಿ(ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ವಿಜಯಪುರದಲ್ಲಿ 40 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಕಾರಣ ಹೋರಾಟವನ್ನು ಶೀಘ್ರದಲ್ಲೇ ಬೆಂಗಳೂರಿಗೆ ವಿಸ್ತರಿಸಲಾಗುವುದು” ಎಂದು ತಿಳಿಸಿದರು.
“ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ, ವಿಜಯಪುರಕ್ಕೆ ಪಿಪಿಪಿ ಮಾದರಿ ಏಕೆ? ಮುಖ್ಯಮಂತ್ರಿಗಳು, ಸಚಿವರು ಜಿಲ್ಲೆಯ ಶಾಸಕರೊಬ್ಬರಿಗೆ ರಾಜಕೀಯ ಲಾಭಕ್ಕಾಗಿ ಮಾತು ಕೊಟ್ಟಿದ್ದಾರೆಂಬ ಆರೋಪ ಕೇಳಿಬರುತ್ತಿದೆ” ಎಂದು ಶಂಕೆ ವ್ಯಕ್ತಪಡಿಸಿದರು.
“ವಿಜಯಪುರದಲ್ಲಿ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ ಹಿಂದೆ ಭೂ ಮಾಫಿಯಾ, ವೈದ್ಯಕೀಯ ಮಾಫಿಯಾ ಮಾಡುತ್ತಿವೆ” ಎಂದು ಆರೋಪಿಸಿದರು.
“ವಿಜಯಪುರ ಜಿಲ್ಲೆಯಲ್ಲಿ ನವಜಾತ ಶಿಶು, ತಾಯಿ ಮರಣ, ಅಪೌಷ್ಟಿಕತೆ, ಬಡತನ ಹೆಚ್ಚಿದೆ. ಶೈಕ್ಷಣಿಕವಾಗಿ ಜಿಲ್ಲೆಯು ಹಿಂದುಳಿದಿದೆ. ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದರೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ” ಎಂದು ಹೇಳಿದರು.
“ಖಾಸಗಿ ಕಂಪನಿಗಳು ಎಂದಿಗೂ ಜನರಿಗೆ ಸಹಾಯ, ಸೇವೆ ಮಾಡುವುದಿಲ್ಲ. ಲಾಭಕ್ಕಾಗಿ ಬಂಡವಾಳ ಹೂಡಿಕೆ ಮಾಡುತ್ತವೆ. ಆರೋಗ್ಯ ಉದ್ಯಮವಾಗಬಾರದು, ಸೇವೆಯಾಗಿಯೇ ಇರಬೇಕು. ವೈದ್ಯಕೀಯ ಶಿಕ್ಷಣ ಇಂದು ದೊಡ್ಡ ಮಾಫಿಯಾ ಆಗಿದೆ. ವೈದ್ಯಕೀಯ ಶಿಕ್ಷಣ ಬಡವರಿಗೆ ನಿಲುಕದ ಸ್ಥಿತಿಯಲ್ಲಿದೆ. ಖಾಸಗಿ ಕಾಲೇಜುಗಳು ದುಬಾರಿ ಹಣಕ್ಕೆ ಸೀಟು ಮಾರಾಟ ಮಾಡುತ್ತಿವೆ. ಆರೋಗ್ಯ ಎಂಬುದು ಖರೀದಿ ಮತ್ತು ಮಾರಾಟದ ಸರಕಾಗಬಾರದು” ಎಂದರು.
ಬಸವ ಚಿಂತಕ ಜಿ ಬಿ ಪಾಟೀಲ ಮಾತನಾಡಿ, “ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ಹೆಚ್ಚು ಅನುದಾನದ ಅಗತ್ಯವಿಲ್ಲ. ಕೇವಲ ಕಾಲೇಜು ಕೊಠಡಿಗಳನ್ನು ನಿರ್ಮಿಸಿ, ಅಧ್ಯಾಪಕರನ್ನು ನೇಮಿಸಿದರೆ ಸಾಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನವೆಂಬರ್ 08ಕ್ಕೆ ಕನಕದಾಸರ ಜಯಂತಿ: ತಯಾರಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ
ಗದುಗಿನ ಲಡಾಯಿ ಪ್ರಕಾಶನದ ಸಂಚಾಲಕ ಬಸವರಾಜ ಸೂಳಿಬಾವಿ ಮಾತನಾಡಿ, “ಜನಸಾಮಾನ್ಯರ ಹಿತ ಕಾಯುವ ಬದಲು ಖಾಸಗಿಯವರ ಹಿತ ಕಾಪಾಡಲು ಸಚಿವರು, ಶಾಸಕರು ನಿಂತಿರುವುದು ಸರಿಯಲ್ಲ. ಸಚಿವರು, ಶಾಸಕರು ಜಿಲ್ಲೆಯ ಜನತೆಯ ವಿರೋಧಿಗಳಾಗಬಾರದು, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಿಲ್ಲೆಯ ರಾಜಕಾರಣಿಗಳು ಒಟ್ಟಾಗಿ ಧ್ವನಿ ಎತ್ತಬೇಕಿದೆ” ಎಂದರು.
ಪ್ರಮುಖರಾದ ಡಾ. ಅರವಿಂದ ಮಾಲಗತ್ತಿ, ವಿದ್ಯಾವತಿ ಅಂಕಲಗಿ, ಭರತ್ ಎಚ್ ಟಿ, ಚನ್ನು ಕಟ್ಟಿಮನಿ, ಫಾದರ್ ಕೆವಿನ್, ಶ್ರೀನಾಥ ಪೂಜಾರಿ, ಅನಿಲ ಹೊಸಮನಿ, ಸುರೇಶ ಜಿ ಬಿ, ಲಕ್ಷ್ಮಣ ಹಂದ್ರಾಳ, ಜಗದೇವ ಸೂರ್ಯವಂಶಿ, ಸಿದ್ರಾಮ ಹಳ್ಳೂರ, ಸೋಮು ರಣದೇವಿ ಇದ್ದರು.





