‘ಎಸ್ಐಆರ್ ಗೆ ಬಲಿಗೆ ಪಶುಗಳಾಗುವವರಲ್ಲಿ ಮೊದಲಿಗರು ಎಲ್ಲ ಜಾತಿ, ಧರ್ಮಕ್ಕೆ ಸೇರಿದ ಮಹಿಳೆಯರು, ಬಳಿಕ ಮುಸ್ಲಿಮರು, ದಲಿತರು, ವಲಸೆ ಕಾರ್ಮಿಕರು, ಅನಾಥರು. ಈ ದೇಶದ ಅಂಚಿನಲ್ಲಿರುವ ಜನರು ಎಸ್ಐಆರ್ ನಿಂದ ಹೊರಗುಳಿಯಲಿದ್ದಾರೆ’ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.
ವಿಜಯಪುರದ ಡಾ. ಬಿಆರ್ ಅಂಬೇಡ್ಕರ್ ಸಭಾಭವನದಲ್ಲಿ ಮೇ ಸಾಹಿತ್ಯ ಮೇಳ ಬಳಗ, ಲಡಾಯಿ ಪ್ರಕಾಶನ, ದಲಿತ ವಿದ್ಯಾರ್ಥಿ ಪರಿಷತ್ತು, ಎಂ.ಎಂ.ಡಿ.ಸಿ. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಿ.ಎನ್.ಎಫ್.ಇ ಸಂಘಟನೆಗಳ ಆಶ್ರಯದಲ್ಲಿ ‘ಎಸ್.ಐ.ಆರ್: ಪೌರತ್ನದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ಏರ್ಪಡಿಸಿದ್ದ ಸಂವಾದಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಮೂಲ ಉದ್ದೇಶವೇನೆಂದರೆ ಈ ದೇಶದಲ್ಲಿ ಮತದಾನ ಹಕ್ಕು ಯಾರಿಗೆ ಇರಬೇಕು. ಈ ದೇಶ ಯಾರಿಗೆ ಸೇರಬೇಕು ಎಂದು ನಿರ್ಣಯಿಸುವ ದೊಡ್ಡ ಷಡ್ಯಂತ್ರ ಒಳಗೊಂಡಿದೆ.’ಭಾರತ ಚುನಾವಣಾ ಆಯೋಗವು ಆರಂಭಿಸಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ವ್ಯಾಪಕ ಜನಾಂದೋಲನದ ಅಗತ್ಯವಿದೆ. ಎಸ್ಐಆರ್ ಬಗ್ಗೆ ಕಾಂಗ್ರೆಸ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಿಎಂ ಆದಿಯಾಗಿ ಎಲ್ಲರಿಂದ ಪ್ರತಿರೋಧ ವ್ಯಕ್ತವಾಗಬೇಕು. ಕಾಂಗ್ರೆಸ್ ಉಳಿಯಬೇಕು ಎಂದಾದರೆ ಎಸ್ಐಆರ್ ವಿರುದ್ಧ ಹೋರಾಟ ರೂಪಿಸಬೇಕು ಎಂದರು.
ಮುಖಂಡ ಎಸ್ ಎಂ ಪಾಟೀಲ (ಗಣಿಹಾರ) ಮಾತನಾಡಿ, ಎಸ್ಐಆರ್ ರದ್ದಾಗಲೇ ಬೇಕು. ಇಲ್ಲವಾದರೆ ಪ್ರಜಾಪ್ರಭುತ್ವವೇ ರದ್ದಾಗಲಿದೆ. ಈ ಹಿಂದೆ ಎನ್ಆರ್ಸಿ, ರೈತ ವಿರೋಧಿ ನಾಲ್ಕು ಕಾನೂನುಗಳ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ. ಇದರ ತಡೆಗೆ ಜನಾಂದೋಲನವೊಂದೇ ದಾರಿ ಎಂದು ಹೇಳಿದರು.
ಇದನ್ನೂ ಓದಿ ವಿಜಯಪುರ | ನರ್ಸಿಂಗ್ ವೃತ್ತಿ ಸಮಾಜದ ಹೆಮ್ಮೆಯಾಗಿದೆ: ಡಾ. ಅಶೋಕ ಪಾಟೀಲ
ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಲಾಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಫಾದರ್ ಕೆವಿನ್, ಬಿ. ಭಗವಾನ್ ರೆಡ್ಡಿ, ಎಂ.ಸಿ.ಮುಲ್ಲಾ, ರಾಜಶೇಖರ ಯಡಹಳ್ಳಿ, ಕೆ.ಎಫ್. ಅಂಕಲಗಿ, ಪ್ರೇಮಾ ಕೋಳಿ, ಸುರೇಖಾ ರಜಪೂತ, ಶ್ರೀನಾಥ ಪೂಜಾರಿ, ಯೂಸುಫ್ ನೇವಾರ ಇದ್ದರು.





