ಪ್ರಸ್ತುತ ದಿನಗಳಲ್ಲಿ ಯುದ್ಧೋನ್ಮಾದ ಹೆಚ್ಚಿದ್ದು, ಮಕ್ಕಳಲ್ಲೂ ಇಂತಹ ಭಾವನೆಗಳು ಕಂಡುಬರುತ್ತಿವೆ. ಆದ್ದರಿಂದ ತಾಯಂದಿರಿಗೂ ಈ ವಿಚಾರಗಳನ್ನು ಮುಟ್ಟಿಸಬೇಕು ಎಂದು ಹಿರಿಯ ಪತ್ರಕರ್ತ ಅನಿಲ ಹೊಸಮನಿ ಹೇಳಿದರು.
ವಿಜಯಪುರದ ಪ್ರಗತಿಪರ ಸಂಘಟನೆಗಳ ವೇದಿಕೆಯಿಂದ ಜಪಾನ್ ದೇಶದ ಹಿರೋಷಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಅಮೆರಿಕ ದೇಶವು ಮಾಡಿದ ಅಣುಬಾಂಬ್ ದಾಳಿಯ ಕೃತ್ಯವನ್ನು ವಿರೋಧಿಸಿ ಸ್ಮರಿಸಿದ ಹಿರೋಷಿಮಾ ಕರಾಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಮುಖಂಡ ಜಿ ಜಿ ಗಾಂಧಿಯವರು ಮಾತನಾಡಿ, “ಇಂದು ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ವಿಶ್ವಶಾಂತಿ ಮುಖ್ಯವಾಗಿಲ್ಲ, ತಮ್ಮ ವ್ಯಾಪಾರ ವೃದ್ಧಿಗಾಗಿ ಶಸ್ತ್ರಾಸ್ತ್ರಗಳ ಮಾರಾಟ ನಡೆಸಿವೆ. ಬೇರೆ ದೇಶಗಳು ಆಣುಬಾಂಬ್ ಹೊಂದಬಾರದೆಂದು ಒತ್ತಡ ಹೇರುವ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಾವು ಮಾತ್ರ ಆಣುಬಾಂಬ್ ಸಂಗ್ರಹ ಮಾಡಿಕೊಳ್ಳುತ್ತಿವೆ” ಎಂದು ಹೇಳಿದರು.
ಎಸ್ಯುಸಿಐ(ಸಿ)ನ ರಾಜ್ಯ ಸಮಿತಿ ಸದಸ್ಯ ಟಿ ಎಸ್ ಸುನಿತ್ ಕುಮಾರ ಮಾತನಾಡಿ, “ದುಡಿಯುವ ಜನತೆಯ ಆಳ್ವಿಕೆಯಲ್ಲಿದ್ದ ಸೋವಿಯತ್ ಯೂನಿಯನ್ನ ಜನತೆ ಸ್ಟಾಲಿನ್ ಅವರ ನಾಯಕತ್ವದಲ್ಲಿ ಧೀರೋದ್ಧಾತ ಹೋರಾಟ ಮಾಡಿ, ನಾಗರಿಕತೆಯ ವೈರಿ ಹಿಟ್ಲರ್ನ ದಾಳಿಯನ್ನು ಹಿಮ್ಮೆಟ್ಟಿಸಿ, ಎರಡನೇ ಮಹಾಯುದ್ಧವನ್ನು ಕೊನೆಗೊಳಿಸಿದರು. ಆದರೆ ಮಡಿಯುವ ಜನತೆಯ ಮೇಲುಗೈ ಆಗಿದೆ ಎಂಬುದನ್ನು ಒಪ್ಪಿಕೊಳ್ಳದಂತೆ ಮಾಡಲು ಅಮೇರಿಕಾ ಹಿರೋಷಿಮಾ ಮೇಲೆ ಬಾಂಬ್ ಹಾಕಿತು” ಎಂದರು.
“ಅಂದು ಇಡೀ ವಿಶ್ವಕ್ಕೆ ಲೆನಿನ್ ಹಾಗೂ ಸ್ಟಾಲಿನ್ ನೇತೃತ್ವದ ರಷ್ಯಾ ದುಡಿಯುವ ಜನತೆಯ ಆಶಾಕಿರಣವಾಗಿತ್ತು. ಯುಎಸ್ಎಸ್ಆರ್ನ ಪತನದ ನಂತರ ಸಾಮ್ರಾಜ್ಯಶಾಹಿ ದೇಶಗಳ ದಾಳಿ ಹೆಚ್ಚಿದೆ. ಮನಸ್ಸಿಗೆ ಬಂದಂತೆ ಯುದ್ಧಗಳನ್ನು ಮಾಡಲಾಗುತ್ತಿದೆ. ಬಂಡವಾಳಶಾಹಿ ಶೋಷಣೆಯಿಂದ ಜನತೆ ನಲುಗಿದೆ. ಕೊಳ್ಳುವ ಶಕ್ತಿ ಕುಗ್ಗಿದೆ. ಆದ್ದರಿಂದ ಈ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಮಾರುಕಟ್ಟೆಗಾಗಿ ಯುದ್ಧಗಳನ್ನು ಸೃಷ್ಟಿಸುತ್ತವೆ. ಆರ್ಥಿಕತೆಯ ಮಿಲಿಟರೀಕರಣ ನಡೆಸುತ್ತವೆ. ವಿಶ್ವಶಾಂತಿ ಸಾಮ್ರಾಜ್ಯಶಾಹಿಗಳಿಗೆ ಮರಣ ಶಾಸನವಾಗಿದೆ. ಹೀಗಾಗಿ ಅವರು ಯುದ್ಧಗಳನ್ನು ಸೃಷ್ಟಿಸುತ್ತಾರೆ. ಶಸ್ತ್ರಾಸ್ತ್ರಗಳನ್ನು ಮಾರುತ್ತಾರೆ. ಬಂಡವಾಳಿಗರಿಗೆ ಮಾರುಕಟ್ಟೆಯನ್ನು ಸೃಷ್ಟಿಸುತ್ತಾರೆ. ಈ ತಿಳುವಳಿಕೆಯನ್ನು ನಾವು ಎಲ್ಲ ಜನತೆಗೆ ಹುಟ್ಟಿಸಬೇಕಾಗಿದೆ” ಎಂದು ಹೇಳಿದರು.
ಬಿಎಡ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ ಎ ಪಾಟೀಲ ಮಾತಮಾಡಿ. “ಸಾಮ್ರಾಜ್ಯಶಾಹಿ ವಿಚಾರಗಳನ್ನು ಮುಂದಿನ ಜನಾಂಗ ವಿರೋಧಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಅವಶ್ಯಕತೆ ಇದೆ. ಸಾಮ್ರಾಜ್ಯಶಾಹಿಗಳ ದಾಳಿಗಳಿಗೆ ವಿಶ್ವಸಂಸ್ಥೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಹಿಳೆಯ ಕೊಲೆ: ಮೃತದೇಹವನ್ನು ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದ ಕಿಡಿಗೇಡಿಗಳು
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ವಿ ಎ ಘಂಟೆಪ್ಪಗೋಳ ಮಾತನಾಡಿ, “ಯುದ್ಧ ಬೇಡ ಶಾಂತಿ ಬೇಕು. ಇಂದು ಆಮದು ನೀತಿ, ಸುಂಕ ನೀತಿ, ವ್ಯಾಪಾರಿ ನೀತಿಗಳ ಮೂಲಕ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೊಸ ರೀತಿಯ ದಾಳಿಗಳನ್ನು ನಡೆಸುತ್ತಿವೆ. ಆ ನೀತಿಗಳನ್ನು ವಿರೋಧಿಸಬೇಕು” ಎಂದು ಹೇಳಿದರು.
ಸ್ಲಂ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯ ನಾಯಕ ಅಕ್ರಂ ಮಾಶ್ಯಾಳಕರ್, ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಇದ್ದರು.





