ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಕಾರ್ಮಿಕ ಮುಖಂಡ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ಎಐಕೆಕೆಎಂಎಸ್ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ (AIKKMS & SKM) ದಾವಣಗೆರೆ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ತಕ್ಷಣ ಮತ್ತು ಷರತ್ತುರಹಿತ ಬಿಡುಗಡೆಗೆ ಒತ್ತಾಯಿಸಿ ದಾವಣಗೆರೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, “ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP) ಮಾದರಿಯನ್ನು ವಿರೋಧಿಸುವ ದೀರ್ಘಕಾಲೀನ ಜನಾಂದೋಲನವನ್ನು ಮುನ್ನಡೆಸುತ್ತಿರುವ ಪ್ರಮುಖ ನಾಯಕರಾಗಿದ್ದ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ತನ್ನ ಅಖಿಲ ಭಾರತ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಭಗವಾನ್ ರೆಡ್ಡಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ತಿಳಿಸಿದರು.

“ಭಗವಾನ್ ರೆಡ್ಡಿ ಅವರು ವಿಜಯಪುರ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಮತ್ತು ಕೋರ್ ಕಮಿಟಿ ಸದಸ್ಯರಾಗಿದ್ದು, ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಯುತ್ತಿದ್ದು, ಈ ಚಳವಳಿಗೆ ವಿಜಯಪುರ ಜಿಲ್ಲಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು. ವಿಜಯಪುರದ ಉಸ್ತುವಾರಿ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಾಮ್ರೇಡ್ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ, ಬಿಎನ್ಎಸ್ 307 ಸೇರಿದಂತೆ ಗಂಭೀರ ಹಾಗೂ ಜಾಮೀನುರಹಿತ ಸೆಕ್ಷನ್ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಅತ್ಯಂತ ಹೀನ ಮತ್ತು ಅಧಿಕಾರಶಾಹಿ ಕ್ರಮವಾಗಿದೆ. ಜನರನ್ನು ಭಯಭೀತಗೊಳಿಸಿ ಹೋರಾಟ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನಗಳ ಉದ್ದೇಶವಾಗಿದೆ. ನಾಯಕರನ್ನು ಗುರಿಯಾಗಿಸುವುದು ಸರ್ಕಾರದ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಧೋರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭಗವಾನ್ ರೆಡ್ಡಿ ಸೇರಿದಂತೆ ಬಂಧಿತಗೊಂಡಿರುವ ಎಲ್ಲಾ ನಾಯಕರು ಹಾಗೂ ಹಲವಾರು ಮಹಿಳಾ ಕಾರ್ಯಕರ್ತರನ್ನು ತಕ್ಷಣ ಮತ್ತು ಷರತ್ತುರಹಿತವಾಗಿ ಬಿಡುಗಡೆ ಮಾಡಬೇಕು. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
ಭಗವಾನ್ ರೆಡ್ಡಿ ಹಾಗೂ ರೈತ ಹಾಗೂ SKM ನಾಯಕರು ಹಾಗೂ ಇನ್ನಿತರರ ಬಿಡುಗಡೆಗಾಗಿ ಒತ್ತಾಯಿಸಿ 02-01-2026 ರಂದು ದೇಶವ್ಯಾಪಿ ಪ್ರತಿಭಟನೆಗೆ ಎಐಕೆಕೆಎಂಎಸ್ ಕರೆ ನೀಡುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಶಾಲೆಗಳ ಮುಚ್ಚುವಿಕೆ ವಿರೋಧಿಸಿ ವಿದ್ಯಾರ್ಥಿ ಯುವಜನ ಫೆಡರೇಷನ್ ಪ್ರತಿಭಟನೆ
ಈ ವೇಳೆ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಸಂಚಾಲಕರಾದ ಆವರಗೆರೆ ಉಮೇಶ್, ಎಐಕೆಕೆಎಂಎಸ್ ದಾವಣಗೆರೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ರೈತ ಸಂಘ (ಪುಟ್ಟಣ್ಣಯ್ಯ) ಮುಖಂಡ ಬುಳ್ಳಾಪುರ ಹನುಮಂತಪ್ಪ, ಕರ್ನಾಟಕ ಜನಶಕ್ತಿಯ ಸತೀಶ್ ಅರವಿಂದ್, ಆಲ್ ಇಂಡಿಯಾ ಕಿಸಾನ್ ಸಭಾದ ಐರಣಿ ಚಂದ್ರು, ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಶನ್ ಮುಖಂಡರ ಪರಶುರಾಮ್ ಹಾಗೂ ಕಾರ್ಯಕರ್ತರು ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.





