ಈ ಜನಹೋರಾಟವನ್ನು ಅಳಿಸಲಾಗುವುದಿಲ್ಲ. ಪೋಸ್ಟ್ ಕಾರ್ಡ್ಗಳಿಂದ ರಂಗೋಲಿಯವರೆಗೆ, ಪಂಜಿನ ಮೆರವಣಿಗೆಗಳಿಂದ ಮಕ್ಕಳ ದೇಣಿಗೆಗಳವರೆಗೆ ವಿಜಯಪುರದ ಜನರು ಪ್ರತಿರೋಧವನ್ನು ದಿನನಿತ್ಯದ ಜೀವನದಲ್ಲಿ ನೇಯ್ದಿದ್ದಾರೆ. ನಾಯಕರನ್ನು ಬಂಧಿಸಿದರೂ. ಶೆಡ್ ತೆರವುಗೊಳಿಸಿದರೂ, ಬಣ್ಣಗಳನ್ನು, ಏಕತೆಯನ್ನು, ಆರೋಗ್ಯ ಹಕ್ಕಿನ ಬೇಡಿಕೆಯನ್ನು ಅಳಿಸಲಾಗುವುದಿಲ್ಲ.
2026ರ ಹೊಸ ವರ್ಷದ ಪ್ರಥಮ ದಿನವೇ ವಿಜಯಪುರದಲ್ಲಿ ಪ್ರಜಾಪ್ರಭುತ್ವದ ಬಿರುಕುಗಳು ಬಯಲಾದವು. ಅಂಬೇಡ್ಕರ್ ವೃತ್ತದಲ್ಲಿ ನೂರಕ್ಕೂ ಹೆಚ್ಚು ದಿನಗಳಿಂದ ಸಾಗುತ್ತಿದ್ದ ಹೋರಾಟದ ಬೇಡಿಕೆಯನ್ನು ಹೊತ್ತು, ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದತ್ತ ಶಾಂತಿಯುತ ಮೆರವಣಿಗೆ ನಡೆಸಿದ ಜನರನ್ನು ಮಧ್ಯದಲ್ಲೇ ತಡೆದು ನಾಯಕರನ್ನು ಬಂಧಿಸಲಾಯಿತು. ಇದು ಆಕಸ್ಮಿಕವಲ್ಲ, ಪೂರ್ವನಿಯೋಜಿತ. ಜನಶಕ್ತಿಯಿಂದ బల ಪಡೆದ ಹೋರಾಟವನ್ನು ಅಸ್ಥಿರಗೊಳಿಸಿ ಮೌನಗೊಳಿಸುವ ರಾಜ್ಯ ಸರ್ಕಾರದ ಪ್ರಯತ್ನ. ಮಧ್ಯರಾತ್ರಿ, ಜನರ ಪ್ರತಿರೋಧದ ಸಂಕೇತವಾಗಿದ್ದ ಶೆಡ್ ತೆರವುಗೊಳಿಸಲಾಯಿತು.
ಅಂಬೇಡ್ಕರ್ ವೃತ್ತದ ಶೆಡ್ ಎಂದಿಗೂ ಮೌನವಾಗಿರಲಿಲ್ಲ. ಲಕ್ಷಕ್ಕೂ ಹೆಚ್ಚು ಪೋಸ್ಟ್ ಕಾರ್ಡ್ಗಳು, ರಕ್ತ ಸಹಿ ಅಭಿಯಾನಗಳು, ಪಂಜಿನ ಮೆರವಣಿಗೆಗಳು ಪ್ರತಿದಿನದ ಪ್ರತಿರೋಧದ ನಾದ. ಡಿಸೆಂಬರ್ 1ರಂದು 10,000ಕ್ಕೂ ಹೆಚ್ಚು ಜನರು, ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು, ಸಮಿತಿಯ ಧ್ವಜದಡಿ ಭಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಉಳಿತಾಯವನ್ನು ದೇಣಿಗೆ ಪೆಟ್ಟಿಗೆಯಲ್ಲಿ ಹಾಕಿದರು. ಡಿಸೆಂಬರ್ 15ರಿಂದ 24×7 ನಿರಂತರ ಧರಣಿ ಆರಂಭವಾಯಿತು. ಚಳಿಗಾಲದ ತೀವ್ರತೆಯಲ್ಲಿ ತಾಪಮಾನಗಳು ಕುಸಿದರೂ ಜನರ ಸಂಕಲ್ಪ ಕುಂದಲಿಲ್ಲ. ಹೋರಾಟವು ಸಹಕಾರ ಮತ್ತು ಕಾಳಜಿಯಿಂದ ಸಾಗಿದ ಸಮುದಾಯವಾಗಿ ಬೆಳೆದಿತ್ತು.
ಈ ಹೋರಾಟಕ್ಕೆ ಬೆಂಬಲವಾಗಿ ಹಲವಾರು ಜಾಲಗಳು ಮತ್ತು ಸಂಘಟನೆಗಳು ಮುಂದೆ ಬಂದವು. ನವೆಂಬರ್ 18-19ರ ರಂಗೋಲಿ ಚಳವಳಿ ವಿಶೇಷ. ಜನ ವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳವಳಿ ನಡೆಸಿದ ಈ ಸೃಜನಾತ್ಮಕ ಪ್ರತಿಭಟನೆ ಏಕಕಾಲದಲ್ಲಿ ಜಿಲ್ಲಾ ಕೇಂದ್ರ. ಆರು ತಾಲ್ಲೂಕು ಕೇಂದ್ರಗಳು ಮತ್ತು ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸಾವಿರಾರು ಮಹಿಳೆಯರನ್ನು ಬೀದಿಗಳಲ್ಲಿ ಒಗ್ಗೂಡಿಸಿತು. ಬೀದಿಗಳನ್ನು ಪ್ರತಿರೋಧದ ಕ್ಯಾನ್ವಾಸ್ಗಳನ್ನಾಗಿ ರೂಪಿಸಿದರು. ‘ಆರೋಗ್ಯ ಹಕ್ಕು ಮಾರಾಟದ ವಸ್ತುವಲ್ಲ’ ಎಂಬ ಘೋಷಣೆ ರಂಗೋಲಿಯಲ್ಲಿ ಮೂಡಿತು. ಡೊಳ್ಳು, ಭಾಷಣಗಳು, ಸಹಿ ಅಭಿಯಾನಗಳು ಮನೆಮಾತಾದ ಕಲೆಯೇ ರಾಜಕೀಯ ಘೋಷಣೆಯಾಯಿತು.
ರಂಗೋಲಿ ಚಳವಳಿಯ ಹೊರತಾಗಿ, ದಲಿತ ವಿದ್ಯಾರ್ಥಿ ಪರಿಷತ್, AIDSO ಮತ್ತು ಇತರ ಸಂಘಟನೆಗಳು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಸಮಿತಿಗೆ ಬೆಂಬಲವಾಗಿ ಪ್ರತಿಭಟನೆಗಳನ್ನು ನಡೆಸಿದವು. ಈ ಕ್ರಮಗಳು ಹೋರಾಟವನ್ನು ಶೆಡ್ನಾಚೆಗೆ, ಜಿಲ್ಲೆಯಾದ್ಯಂತ ಹರಡಿಸಿತು. ಹೋರಾಟವು ಸಂಸ್ಕೃತಿ, ವಿದ್ಯಾರ್ಥಿ ಚಳವಳಿ, ಸಮುದಾಯದ ಏಕತೆಯೊಂದಿಗೆ ಜನಹೋರಾಟವಾಗಿ ರೂಪುಗೊಂಡಿತು.

ಈ ಜನಹೋರಾಟವನ್ನು ಅಳಿಸಲಾಗುವುದಿಲ್ಲ. ಪೋಸ್ಟ್ ಕಾರ್ಡ್ಗಳಿಂದ ರಂಗೋಲಿಯವರೆಗೆ, ಪಂಜಿನ ಮೆರವಣಿಗೆಗಳಿಂದ ಮಕ್ಕಳ ದೇಣಿಗೆಗಳವರೆಗೆ ವಿಜಯಪುರದ ಜನರು ಪ್ರತಿರೋಧವನ್ನು ದಿನನಿತ್ಯದ ಜೀವನದಲ್ಲಿ ನೇಯ್ದಿದ್ದಾರೆ. ನಾಯಕರನ್ನು ಬಂಧಿಸಿದರೂ. ಶೆಡ್ ತೆರವುಗೊಳಿಸಿದರೂ, ಬಣ್ಣಗಳನ್ನು, ಏಕತೆಯನ್ನು, ಆರೋಗ್ಯ ಹಕ್ಕಿನ ಬೇಡಿಕೆಯನ್ನು ಅಳಿಸಲಾಗುವುದಿಲ್ಲ. “ನಮ್ಮ ಬಣ್ಣಗಳೇ ನಮ್ಮ ಧ್ವನಿಗಳು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಳಿಸಲು ನಾವು ಬಿಡುವುದಿಲ್ಲ” ಎಂದು ರಂಗೋಲಿ ಚಳವಳಿಯ ಸಂಘಟಕ ಘೋಷಿಸಿದಂತೆ, ಪ್ರತಿರೋಧ ಜೀವಂತವಾಗಿದೆ.
ವಿಜಯಪುರದ ಹೋರಾಟವು ಕೇವಲ ಒಂದು ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನ ವಿಷಯವಲ್ಲ. ಅದು ಆರೋಗ್ಯ ಕ್ಷೇತ್ರವು ಲಾಭಕ್ಕಾಗಿ ಸೇವೆ ಮಾಡಬೇಕೋ, ಜನರಿಗಾಗಿ ಸೇವೆ ಮಾಡಬೇಕೋ ಎಂಬ ಪ್ರಶ್ನೆ. ಅದು ಪ್ರಜಾಪ್ರಭುತ್ವವು ನಾಗರಿಕರಿಗೆ ಭಯವಿಲ್ಲದೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಬೇಕೋ. ಇಲ್ಲವೋ ಎಂಬ ಪ್ರಶ್ನೆ. Article 19-ಮಾತಿನ ಸ್ವಾತಂತ್ರ್ಯ, ಶಾಂತಿಯುತ ಸಭೆ ಸೇರುವ ಹಕ್ಕು, ಸಂಘಟನೆ ರಚಿಸುವ ಹಕ್ಕು. ವಿಜಯಪುರದಲ್ಲಿ ಇವುಗಳನ್ನು ರಾಜ್ಯ ಸರ್ಕಾರವೇ ದುರ್ಬಲಗೊಳಿಸಿದೆ.
ವಿಜಯಪುರದ ಹೋರಾಟದ ದಮನ ಪ್ರತ್ಯೇಕ ಘಟನೆ ಅಲ್ಲ. ದೇಶದಾದ್ಯಂತ ಖಾಸಗೀಕರಣ, ಸ್ಥಳಾಂತರ, ಅಸಮಾನತೆ ವಿರುದ್ಧ ಧ್ವನಿ ಎತ್ತುವ ನಾಗರಿಕರ ಮೇಲೆ ನಿರ್ಬಂಧಗಳು ಹೇರಲಾಗುತ್ತಿವೆ, ನಿಗಾವಳಿ ಹೆಚ್ಚುತ್ತಿದೆ. ಅಪರಾಧೀಕರಣ ನಡೆಯುತ್ತಿದೆ. ಪ್ರಜಾಪ್ರಭುತ್ವದ ಸ್ಥಳವು ಕುಗ್ಗುತ್ತಿದೆ. ಶಾಂತಿಯುತ ಸಭೆಗಳನ್ನು ಬೆದರಿಕೆ ಎಂದು ಪರಿಗಣಿಸಲಾಗುತ್ತಿದೆ. ಸಂಸ್ಕೃತಿಯ ಪ್ರತಿರೋಧವನ್ನು ಅಶಾಂತಿ ಎಂದು ತಳ್ಳಿಹಾಕಲಾಗುತ್ತಿದೆ.
ಜನವರಿ 1ರ ಮಧ್ಯರಾತ್ರಿ ತೆರವುಗೊಳಿಸಲಾದ ಶೆಡ್ ಜನರ ಪ್ರತಿರೋಧವನ್ನು ಮೌನಗೊಳಿಸಲು ಉದ್ದೇಶಿತವಾಗಿತ್ತು. ಆದರೆ ಹೋರಾಟದ ನೆನಪು ಇನ್ನೂ ಜೀವಂತವಾಗಿದೆ. ವಿಜಯಪುರದ ಧ್ವನಿಗಳು-ರಂಗೋಲಿಯಲ್ಲಿ ಬಿಡಿಸಿದವು. ಪೋಸ್ಟ್ ಕಾರ್ಡ್ಗಳಲ್ಲಿ ಬರೆದವು, ಘೋಷಣೆಗಳಲ್ಲಿ ಕೂಗಿದವು, ಏಕತೆಯಲ್ಲಿ ಬದುಕಿದವು- ಒಂದು ದೊಡ್ಡ ಸತ್ಯವನ್ನು ಪ್ರತಿಧ್ವನಿಸುತ್ತವೆ: ಪ್ರತಿಭಟನೆಯಿಲ್ಲದೆ ಪ್ರಜಾಪ್ರಭುತ್ವವೇ ಉಸಿರಾಡಲಾರದು. ವಿಜಯಪುರದ ಜನರು ಪ್ರತಿಭಟನೆಯನ್ನು ಉಸಿರಾಡಿದರು; ಅವರ ಕಲ್ಪನೆಗಳು ಪ್ರತಿರೋಧದಲ್ಲಿ ರೂಪುಗೊಂಡವು. ಇಂದು ಕೂಡ, ಜನರ ಉಸಿರು ಎರಡು ಬೇಡಿಕೆಗಳನ್ನು ಪ್ರತಿಧ್ವನಿಸುತ್ತಿದೆ, ಅದು “ಜಿಲ್ಲಾ ಆಸ್ಪತ್ರೆಯನ್ನು ಉಳಿಸಿ ಮತ್ತು ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು”.


ಟೀನಾ ಝೇವಿಯರ್
ಕರ್ನಾಟಕ ಜಾರೋಗ್ಯ ಚಳವಳಿ ಕಾರ್ಯಕರ್ತೆ




