ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಸಾವಯವ ಕೃಷಿಯ ಮಹತ್ವವನ್ನು ಸಾರುವ ‘ಸಾವಯವ ಸುಗ್ಗಿ ಸಂಭ್ರಮ’ ಕಾರ್ಯಕ್ರಮವು ಅತ್ಯಂತ ಉತ್ಸಾಹದಿಂದ ನೆರವೇರಿತು. ಸಾವಯವ ಪ್ರಗತಿಪರ ರೈತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಇಂದು ಹೊಸಮನಿ ಅವರ ನೇತೃತ್ವದಲ್ಲಿ, ಗ್ರಾಮದ ರಾಜಶ್ರೀ ಹೊಸಮನಿ ಅವರ ತೋಟದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ ರೈತ ಮಹಿಳೆಯರು ಭಾಗವಹಿಸಿ, ತಮ್ಮ ಸಾವಯವ ಕೃಷಿ ಅನುಭವಗಳು, ಸವಾಲುಗಳು ಮತ್ತು ಸಾಧನೆಗಳನ್ನು ಪರಸ್ಪರ ಹಂಚಿಕೊಂಡರು. ಸ್ಥಳೀಯ ರೈತ ಮಹಿಳೆಯರು ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ (Value Addition) ಮಾಡಿ ನೇರವಾಗಿ ಬೆಂಗಳೂರು ಮಾರುಕಟ್ಟೆಗೆ ಮಾರಾಟ ಮಾಡುತ್ತಾ ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾವಯವ ಚಿಂತಕ ರಾಜಶೇಖರ್ ನಿಂಬರಗಿ ಅವರು ವಿಷಮುಕ್ತ ಕೃಷಿಯ ಅಗತ್ಯತೆ, ಮಣ್ಣಿನ ಆರೋಗ್ಯ ಮತ್ತು ಭವಿಷ್ಯದ ಕೃಷಿ ದಿಕ್ಕುಗಳ ಕುರಿತು ಮಾರ್ಗದರ್ಶನ ನೀಡಿದರು.
ಒಡಲದನಿ ಮಹಿಳಾ ಒಕ್ಕೂಟದ ನಿರ್ದೇಶಕಿ ಭುವನೇಶ್ವರಿ ಕಾಂಬಳೆ ಮಾತನಾಡಿ, ರೈತ ಮಹಿಳೆಯರಲ್ಲಿ ಇರುವ ನೈಜ ಕೃಷಿ ಜ್ಞಾನ ಮತ್ತು ಕೌಶಲ್ಯಗಳು ಅತ್ಯಂತ ಅದ್ಭುತವಾಗಿವೆ. ಮಣ್ಣಿನ ನಾಡಿಮಿಡಿತ ಅರಿತಿರುವ ಈ ಮಹಿಳೆಯರು ಸಾವಯವ ಕೃಷಿಯ ಮೂಲಕ ತರುತ್ತಿರುವ ಬದಲಾವಣೆಗಳು ರಾಜ್ಯಕ್ಕೆ ಮಾದರಿಯಾಗುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದರು.
ಸಂವಾದ ಸಂಸ್ಥೆಯ ರಮೇಶ್ ಚೀಮಾನಹಳ್ಳಿ ಮಾತನಾಡಿ, ಮಣ್ಣನ್ನು ನಂಬಿದ ಮಹಿಳೆಯರು ಇಂದು ಬೆಳೆಗಾರರಾಗಿ ಮಾತ್ರವಲ್ಲದೆ ಉದ್ದಿಮೆದಾರರಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಬಲೀಕರಣದ ಹಾದಿಯಲ್ಲಿ ಸಂವಾದ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂವಾದ ಸಂಸ್ಥೆಯ ಅಂಬಿಕಾ ಅವರು ಕೂಡ ಉಪಸ್ಥಿತರಿದ್ದು, ರೈತ ಮಹಿಳೆಯರ ಪ್ರಯತ್ನಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಮೋರೆ, ಪಂಚಾಯತ್ ಸದಸ್ಯೆ ಅನುಸೂಯ ಸಾವಳಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದು, ರೈತ ಮಹಿಳೆಯರ ಈ ವಿಶಿಷ್ಟ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.
ಸ್ಥಳೀಯ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೋಟಕ್ಕೆ ಭೇಟಿ ನೀಡಿ ಜೀವಾಮೃತ, ದಶಪರ್ಣಿ ಕಷಾಯ ಮತ್ತು ವಿವಿಧ ಸಾವಯವ ತರಕಾರಿ ಬೆಳೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ರೈತ ಮಹಿಳೆಯರು ಹಾಡಿದ ಜಾನಪದ ಸುಗ್ಗಿ ಹಾಡುಗಳು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಳೆ ತುಂಬಿದವು.
ಕಾರ್ಯಕ್ರಮದಲ್ಲಿ ರೈತ ಮಹಿಳೆ ಲಕ್ಷ್ಮಿ ದ್ರಾವಿಡ್, ಸಂಗೀತ ಮಯೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.





