ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಪಿಡಿಒ ಹಾಗೂ ಜನಪ್ರತಿನಿಧಿಗಳ ಕೆಲಸ ಪ್ರಮುಖ ಎಂದು ಅಪ್ನಾ ದೇಶ್-ಅಪ್ನಾ ಗ್ರಾಮ ಸಂಘಟನೆಯ ವಿಜಯಪುರ ಜಿಲ್ಲಾ ಅಧ್ಯಕ್ಷ ರವೀಂದ್ರ ಬೆಳ್ಳಿ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮ ಪಂಚಾಯತಿಯಲ್ಲಿ ಅವ್ಯಹಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಪ್ನಾ ದೇಶ್-ಅಪ್ನಾ ಗ್ರಾಮ ಸಂಘಟನೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಪಿಡಿಒಗಳು ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ 2020-25ನೇ ಸಾಲಿನ ಆಯವ್ಯಯ ನೀಡಬೇಕು. ₹7 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂಬ ಆರೋಪ ಇದೆ. ಈ ಕುರಿತು ಮಾಹಿತಿ ನೀಡಬೇಕು” ಎಂದರು.
ರೈತ ಮುಖಂಡ ಎಸ್ ಟಿ ಪಾಟೀಲ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ ಗ್ರಾಮದ ಪ್ರತಿಯೊಬ್ಬರ ಸಮ್ಮುಖದಲ್ಲಿ ಗ್ರಾಮಸಭೆ ಮಾಡಿ ಗ್ರಾಮದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಜ.25ರಂದು ರಾಷ್ಟೀಯ ಮತದಾರರ ದಿನಾಚರಣೆ
ತಾಲೂಕು ಪಂಚಾಯತಿ ಇಒ ಬಿ ಎಸ್ ಕಣ್ಣೂರ ಮಾತನಾಡಿ, ಪಿಡಿಒ ಸುರೇಶ ಲೋನಿ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಅವರಿಗೆ ಪಾರದರ್ಶಕವಾಗಿ ಮೂರು ದಿನಗಳಲ್ಲಿ ಮಾಹಿತಿ ಕೊಡಬೇಕು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಸೂಚಿಸಿದರು.
ಪ್ರತಿಭಟನೆಯಲ್ಲಿ ಶಿವಾನಂದ ಶಿವಾಚಾರ್ಯ, ಬಿ ಕೆ ಪಾಟೀಲ, ಸುನಿಲ ನಾರಾಯಣಕರ, ಸಿದ್ದರಾಮ ಹಳ್ಳೂರ, ಶರಭಯ್ಯ ಹಿರೇಮಠ, ರಾಯಪ್ಪ ಗಡೆಕಾರ, ಕಣ್ಣಪ್ಪ ತೇಲಿ, ಶಿವಣ್ಣ ಗುಂಜಟ್ಟಿ, ಸಾಹೇಬಗೌಡ ಪಾಟೀಲ ಹಾಗೂ ಮಲ್ಲಯ್ಯ ಒಡೆಯರ ಇದ್ದರು.





