ವಿಜಯಪುರ ಜಿಲ್ಲೆಯ ಕೊಲ್ಹಾರ ತಹಶೀಲ್ದಾರ ಕಚೇರಿ ಎದುರುಗಡೆ ಮುಳವಾಡ ಕೆಐಡಿಬಿಗೆ ಜಮೀನು ಕಳೆದುಕೊಂಡ ರೈತರು ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಳೆದ 30 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ರೈತರು ತಾತ್ಕಾಲಿಕವಾಗಿ ಹಿಂಪಡೆದರು.
ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿಗಳು 30 ದಿನಗಳ ಕಾಲಾವಧಿ ಪಡೆದ ಹಿನ್ನೆಲೆ ಸಂತ್ರಸ್ತರು ಧರಣಿ ಹಿಂಪಡೆದರು. ಜಿಲ್ಲಾಧಿಕಾರಿ ಡಾ.ಆನಂದ ಕೆ ಈಚೆಗೆ ವಿಜಯಪುರದಲ್ಲಿ ಭೂಸಂತ್ರಸ್ತ ರೈತರು ಹಾಗೂ ಧಾರವಾಡ ಕೆಐಡಿಬಿ ಎಸ್ಎಲ್ಓ ಡಾ. ಕವಿತಾ ಯೋಗಪ್ಪನವರ ಜೊತೆ ಸಭೆ ನಡೆಸಿ ಚರ್ಚಿಸಿ, ಬೇಡಿಕೆಗಳನ್ನು ಈಡೇರಿಸಲು 30 ದಿನಗಳ ಕಾಲಾವಕಾಶ ತೆಗೆದುಕೊಂಡ ಹಿನ್ನೆಲೆ ಅಪಾರ ಜಿಲ್ಲಾಧಿಕಾರಿ ಡಾ. ಔದ್ರಾಮರವರು ಧರಣಿ ನಿರತ ಭೂಸಂತ್ರಸ್ಥರ ರೈತರ ಹೋರಾಟದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪ್ರಯುಕ್ತ ಭೂಸಂತ್ರಸ್ತ ರೈತರು ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.
ಮುಳವಾಡ ಭೂ ಹಿತರಕ್ಷಣ ನಿರಾಶ್ರಿತರ ರೈತರ ಸಂಘದ ಉಪಾಧ್ಯಕ್ಷ ಬಸವರಾಜ ಬೀಳಗಿ ಮಾತನಾಡಿ, “ಮುಳವಾಡ ಗ್ರಾಮದಲ್ಲಿ ಕೆಐಡಿಬಿ ಧಾರವಾಡ ಲಕ್ಕಮ್ಮನಹಳ್ಳಿಯವರು ಮುಳವಾಡ ಗ್ರಾಮದ ರೈತರ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ಒಟ್ಟು 3230.3 ಎಕರೆಗೆ ಯಾವುದೇ ಅವಾರ್ಡ್ ಮಾಡದೆ ಒಂದೇ ಕಂತಿನಲ್ಲಿ ಪರಿಹಾರ ವಿತರಿಸದೆ ಹಂತ ಹಂತವಾಗಿ ವಿತರಿಸಿದ್ದು ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸದೆ ರೈತರಿಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿದ ಹಿನ್ನೆಲೆಯಲ್ಲಿ ನಾವು ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಒಂದು ವೇಳೆ 30 ದಿನದೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಮೀನು ಕಳೆದುಕೊಂಡ ರೈತರೆಲ್ಲರೂ ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಗಳು:
1) ಕೋರ್ಟ್ ಆದೇಶದ ಪ್ರಕಾರ ಒಂದು ಎಕರೆ ನೀರಾವರಿ ಜಮೀನಿಗೆ ₹24 ಲಕ್ಷ, ಖುಷ್ಕಿ 20 ಲಕ್ಷ ಪರಿಹಾರ ನೀಡುವುದು.
2) ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ವಿತರಣೆ.
3) ನೊಂದಣಿ ರಿಯಾಯಿತಿ ಪ್ರಮಾಣ ಪತ್ರ ವಿತರಣೆ.
4) ಜಮೀನುಗಳಲ್ಲಿರುವ ಗಿಡ, ಮರ,ಭಾವಿ ಕೊಳವೆ ಬಾವಿಗೆ ಜೆಎಂಎಸ್ಸಿ ಪ್ರಕಾರ ಶೇ. 18 ಬಡ್ಡಿ ಸೇರಿಸಿ ಪರಿಹಾರ ವಿತರಿಸುವುದು.
5) ತೋಟದ ವಸ್ತಿ ಮನೆಗಳಿಗೆ ಕರ್ನಾಟಕ ಗ್ರಹ ಮಂಡಳಿಯಲ್ಲಿ ಜಾಗ ನೀಡುವುದು.
6) ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ.
7) ಅ ಖರಾಬ ಜಮೀನಿಗೆ ಒಪ್ಪಿಗೆ ಪ್ರಕಾರ ಒಂದು ಎಕರೆ ನೀರಾವರಿಗೆ ₹9.5 ಲಕ್ಷ, ಖುಷ್ಕಿ ಭೂಮಿಗೆ ₹7.5 ಲಕ್ಷದಂತೆ ಮತ್ತು ಶೇ. 18 ಬಡ್ಡಿ ಸೇರಿಸಿ ಮುಂತಾದ ಪರಿಹಾರ.
ಇದನ್ನೂ ಓದಿ: ವಿಜಯಪುರ | ರೋಹಿತ್ ವೇಮುಲ ಕಾಯ್ದೆ ಜಾರಿಗೆ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮನವಿ
ತಹಶೀಲ್ದಾರ ಸಂತೋಷ ಮ್ಯಾಗೇರಿ, ಪ್ರಭರಿತಸಿಲ್ದಾರ ಎಸ್ ಅರಿಕೇರಿ, ತಾಪಂ ಇಒ ಸುನಿಲ ಮುದ್ದಿನ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಭೂ ಇತರ ಕ್ಷಣ ನಿರಾಶ್ರಿತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರವಿ ಗೋಳಸಂಗಿ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಳುವಾಡ, ಮಲಘಣ ಹಾಗೂ ಕಲ ಗುರುಕಿ ಗ್ರಾಮದ ನೂರಾರು ರೈತರು ಇದ್ದರು.





