ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ, ಅನಧಿಕೃತ ವಸತಿ ಹಾಗೂ ಶಿಕ್ಷಣ ಕಾಯ್ದೆಯ ನಿಯಮಾವಳಿಗಳ ಉಲ್ಲಂಘನೆ ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ದಸಂಸ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ.
ಈ ವೇಳೆ ಬಾಲಚಂದ್ರ ಹುಲ್ಲೂರ ಮಾತನಾಡಿ, “ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸ್ಫೂರ್ತಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಹಲವು ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ. ಎಂಟು ದಿನಗಳಾದರೂ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳು ಅಕ್ರಮ ಶಾಲೆಗಳೊಂದಿಗೆ ಶಾಮೀಲಾದ ಶಂಕೆಗೆ ಕಾರಣವಾಗಿದೆ ಎಂದರು. ಧಾರವಾಡದ ಆಯುಕ್ತರು ಖುದ್ದಾಗಿ ಆಗಮಿಸಿ ಮೊದಲು ವಿದ್ಯಾಸ್ಫೂರ್ತಿ ಶಾಲೆಯನ್ನು ಸೀಜ್ ಮಾಡಬೇಕು. ಜೊತೆಗೆ ಈವರೆಗೆ ಕ್ರಮ ಕೈಗೊಳ್ಳದ ಡಿಡಿಪಿಐ ಹಾಗೂ ಬಿಇಒ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ನ್ಯಾಯ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಹೋರಾಟಗಾರರನ್ನು ಮನವೊಲಿಸಲು ಡಿಡಿಪಿಐ ವೀರಯ್ಯ ಸಾಲಿಮಠ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಸ್ಥಳಕ್ಕೆ ಭೇಟಿ ನೀಡಿ ಪ್ರಯತ್ನಿಸಿದರೂ, ಹೋರಾಟಗಾರರು ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಖಡಕ್ ನಿಲುವು ತಳೆದರು. ಈ ವೇಳೆ ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ಇದನ್ನೂ ಓದಿ: ವಿಜಯಪುರ | ಪಠ್ಯಕ್ರಮ, ಬೋಧನಾ ವಿಧಾನಗಳಲ್ಲಿ ಅಗತ್ಯ ಸುಧಾರಣೆ ತರುವುದು ಇಂದಿನ ಅಗತ್ಯ: ಪ್ರೊ. ಜಿ. ಬಿ ಸೋನಾರ್
ಹೋರಾಟದ ಏಳನೇ ದಿನ ತಮಟೆ ಚಳವಳಿ ಹಾಗೂ ಕಪ್ಪುಪಟ್ಟಿ ಪ್ರದರ್ಶನ ನಡೆಸಲಾಗಿತ್ತು. ಧರಣಿಯಲ್ಲಿ ಹಿರಿಯ ಹೋರಾಟಗಾರ ಹರೀಶ ನಾಟಿಕಾರ, ರಾಜ್ಯ ಹೋರಾಟಗಾರ ದುರ್ಗಪ್ಪ ದೊಡಮನಿ, ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಸೇರಿದಂತೆ ಪರಶುರಾಮ ಕವಡಿಮಟ್ಟಿ, ಶ್ರೀಶೈಲ ಸುಧಾಕರ, ಶೇಖರ ಹಡಗಿನಾಳ, ಸುರೇಶ ದೊಡಮನಿ, ದಾಳಪ್ಪ ಕೆಳಗೇರಿ, ಶಿವಪ್ಪ ಮಾದರ, ಮೌನೇಶ ಮಾದರ, ಸಂಗಮೇಶ ಢವಳಗಿ, ಪರಶುರಾಮ ಹೊಸಮನಿ, ಮಾರುತಿ ಸಿದ್ದಾಪೂರ, ರಾಘವೇಂದ್ರ ಮಾದರ, ಯಮನೂರಿ ಗುಡಿಹಾಳ, ಬಸವರಾಜ ಮಲಗಲದಿನ್ನಿ, ಶಿವು ದೇವೂರ, ವಿದ್ಯಾನಗರ ನಿವಾಸಿ ಗೌರಮ್ಮ ಹುನಗುಂದ ಹಾಗೂ ಸಾಮಾಜಿಕ ಚಿಂತಕ ಸುನೀಲ ಮನಗೂಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.





