ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬೇರೊರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದಿಂದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದಂಥವರು ದಲಿತ ನಾಯಕ ಡಿ ಬಿ ಮುದೂರ ಅವರು ಎಂದು ಶಾಸಕ ಸಿ ಎಸ್ ನಾಡಗೌಡ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ ಬಿ ಮುದೂರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹೆಚ್ಚು ಓದಿಲ್ಲದಿದ್ದರೂ ಅನುಭವದಿಂದ ವಿದ್ಯೆಯನ್ನು ಸಂಪಾದನೆ ಮಾಡಿದ್ದರು. ಅವರು ಮಾತುಗಳಿಂದ ಆಳವಾದ ವಿಚಾರಧಾರೆಗಳನ್ನು ಹೊಂದಿದ್ದರು ಎಂಬುದು ಅರ್ಥವಾಗುತ್ತದೆ. ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದರು. ಸಮಾನತೆಗೋಸ್ಕರ ಹೋರಾಟ ಮಾಡುವುದು ಜನ್ಮಸಿದ್ಧ ಹಕ್ಕು. ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಆರ್ಥಿಕ, ಶೈಕ್ಷಣಿಕ ಸಾಮಾಜಿಕ ಬದಲಾವಣೆ ತರಬೇಕು ಎಂಬ ದಿಟ್ಟವಾದ ಹೋರಾಟವನ್ನು ಡಿ ಬಿ ಮೂದೂರ ತಮ್ಮ ಸಂಗಡಿಗರೊಂದಿಗೆ ಸಂಘಟಿಸಿದ್ದರು” ಎಂದು ಹೇಳಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, “ಡಿ ಬಿ ಮೂದೂರ ಕಠೋರ ಸ್ವಭಾವದ ವ್ಯಕ್ತಿ. ಆದರೆ ಒಳ್ಳೆಯ ಮನಸುಳ್ಳವರು. ರಾಮಣ್ಣ ಚಲವಾದಿ, ಬಸವರಾಜ ನಾಗರಾಳ, ಡಿ ವಿ ಮೂದೂರ ಈ ಭಾಗದಲ್ಲಿ ದಲಿತ ಸಂಘಟನೆ ಕಟ್ಟಿದ್ದಾರೆ. ಆದರೆ ಇತ್ತೀಚಿಗೆ ನೀಲಿ ಶಾಲು ಹಾಕಿಕೊಂಡು ಒಬ್ಬೊಬ್ಬರು ಎಂಎಲ್ಎ ಕರೆದು ವೈಯಕ್ತಿಕ ಪ್ರತಿಷ್ಠಿಯನ್ನು ಇಟ್ಟುಕೊಂಡು ಸಂಘಟನೆ ಕಟ್ಟಿದರೆ ಸಾಮಾಜಿಕ ಜವಾಬ್ದಾರಿ ಈಡೇರಿಸಲು ಆಗುವುದಿಲ್ಲ. ಒಂದೇ ಬ್ಯಾನರ್ನಲ್ಲಿ ತಾಲೂಕಿನಲ್ಲಿ ಗಂಭೀರವಾಗಿ ಹೋರಾಟ ನಡೆಸಬೇಕು. ದಲಿತರು ಒಂದಾದರೆ ಮತ್ತೆ ಸಂಘಟನೆಗೆ ಬಲಿಷ್ಠತೆ ಬರುತ್ತದೆ” ಎಂದರು.
ಹೋರಾಟಗಾರ ರಮೇಶ ಆಸಂಗಿ ಮಾತನಾಡಿ, “ದಲಿತರ ಹಕ್ಕುಗಳಿಗೆ ಧಕ್ಕೆಯಾದಾಗ ಗಟ್ಟಿ ದ್ವನಿ ಎತ್ತಿದ್ದು ಡಿ ಬಿ ಮೂದೂರ. ಗೆಜ್ಜೆಪೂಜೆ ದೇವದಾಸಿ ಪದ್ಧತಿ ಬೆತ್ತಲೆ ಸೇವೆಯ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಅವರು ಮಾಡಿದ್ದಾರೆ” ಎಂದರು.
ಹಿರಿಯ ಹೋರಾಟಗಾರ ಅಭಿಷೇಕ ಚಕ್ರವರ್ತಿ ಮಾತನಾಡಿ, “ಮೂಡನಂಬಿಕೆಗಳ ವಿರುದ್ಧ ಡಿ ಬಿ ಮೂದೂರ ಹೋರಾಟ ಮಾಡಿದರು. ದೇವಿಗೆ ಕೋಣಗಳ ಬಲಿ, ಬೆತ್ತಲೆ ಸೇವೆ, ಬಾವಿ ನೀರು ಮುಟ್ಟಿರುವುದು ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು ಡಿ ಬಿ ಮೂದೂರ” ಎಂದರು.
ಇದನ್ನೂ ಓದಿದ್ದೀರಾ? ʼಸ್ತನ್ಯಪಾನʼ ಅಮೃತ ಸಮಾನ: ತಾಯಿ-ಮಗು ಬಾಂಧವ್ಯಕ್ಕೆ ಅಡಿಗಲ್ಲು
ಸಂಸದ ರಮೇಶ ಜಿಗಜಿಣಿಗಿ, ಬಾಗಲಕೋಟೆಯ ಧರ್ಮಪಾಲ ಬಂತೇಜಿ, ತಹಶೀಲ್ದಾರ್ ಕೀರ್ತಿ ಚಾಲಕ, ಸಮಾಜ ಕಲ್ಯಾಣ ನಿರ್ದೇಶಕಿ ಬಿಜಿ ಮಠ, ಸೋಮನಗೌಡ ಪಾಟೀಲ, ನಡಹಳ್ಳಿ ವಕೀಲ ಎಂಎಚ್ ಹಾಲಣ್ಣವರ, ಪ್ರಮುಖರಾದ ಮುತ್ತಪ್ಪ ಚಮಲಾಪುರ, ಕೆ ವಿ ದೊಡ್ಡಮನಿ, ತಿಪ್ಪಣ್ಣ ದೊಡ್ಮನಿ, ಆರ್ ಎನ್ ಹಾದಿಮನಿ, ಎಸ್ ಹೆಚ್ ಲಟಗೇರಿ, ದೇವೇಂದ್ರ ಹಾದಿಮನಿ, ಅರವಿಂದ ಸಾಲವಾಡಗಿ, ಶಾಂತಮ್ಮ ಡಿ ಮೂದೂರ, ರೇವಣಪ್ಪ ಹರಿಜನ, ಬಲಭೀಮ ನಾಯ್ಕಡಿ, ಅಶೋಕ ಇಲಕಲ್ಲ, ಯಮನಪ್ಪ ಹಂಗರಗಿ, ಮಲ್ಲಪ್ಪ ಬಸರಕೋಡ, ನಾಗೇಶ ಭಜಂತ್ರಿ, ಚನ್ನಪ್ಪಬಸಪ್ಪ ವಿಜಯಕರ, ಅಶೋಕ ಛಲವಾದಿ, ಪರಶುರಾಮ ದಿಂಡಿವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾರಾನಾಥ ಗುರುನಾಳ, ತಿಪ್ಪಣ್ಣ ಗೋನಾಳ, ಹರೀಶ ನಾಟೆಕರ ಪ್ರಕಾಶ್ ಚಲವಾದಿ, ಗೋಪಾಲ ಕಟ್ಟಿಮನಿ, ಗುಂಡಪ್ಪ ಛಲವಾದಿ, ಮಂಜುನಾಥ ಕಟ್ಟಿಮನಿ, ಪ್ರಕಾಶ ಸರೋರ, ಆನಂದ ಮೂದೊರ ಇದ್ದರು.





