ಬಸವಣ್ಣನವರು ಮಹಿಳೆಯರಿಗೂ ಇಷ್ಟಲಿಂಗ ಧರಿಸುವ ಮತ್ತು ದೇವ ಪೂಜೆ ಮಾಡುವ ಹಕ್ಕನ್ನು ನೀಡುವ ಮೂಲಕ ಲಿಂಗಸಮಾನತೆಯನ್ನು ಸಾಧಿಸಿದರು. ಸಾಮಾಜಿಕ ಭೇದಭಾವಗಳನ್ನು ವಿರೋಧಿಸಿ, ಸ್ತ್ರೀಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನೀಡುವ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಕಲ್ಪಿಸಿದರು ಎಂದು ಆಲಮೇಲ ವಿರಕ್ತ ಮಠದ ಶ್ರೀ ಜಗದ್ಗುರು ಮಲ್ಲಿಬೊಮ್ಮಯ್ಯ ಶರಣರು ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸ್ಥಳೀಯ ಶ್ರೀ ವೀರೇಶ್ವರ ಮಹಾ ಮನೆ ಮಠದಲ್ಲಿ ಜರುಗಿದ ಶರಣ ದಂಪತಿಗಳ 107ನೇ ಪುಣ್ಯಸ್ಮರಣೆ ನಿಮಿತ್ತ ಪ್ರವಚನದಲ್ಲಿ ಮಾತನಾಡಿದ ಅವರು, “ಈ ಕನ್ನಡ ನೆಲದಿಂದ ಜಗತ್ತಿಗೆ ಮೊದಲು ಪ್ರಜಾಪ್ರಭುತ್ವದ ಅನುಭವ ಮಂಟಪ ಕೊಟ್ಟು, ಸ್ತ್ರೀ-ಪುರುಷರೆಂಬ ಭೇದವನ್ನು ತೊಡೆದುಹಾಕಿ, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಬಸವಣ್ಣನವರ ಮುಖ್ಯ ಉದ್ದೇಶವಾಗಿತ್ತು” ಎಂದು ಸ್ಮರಿಸಿದರು.
“ಬಸವಣ್ಣನವರ ಶರಣ ಸಂಸ್ಕೃತಿಯು ಸ್ತ್ರೀಯರಿಗೆ ವೈಚಾರಿಕ ಪ್ರಜ್ಞೆ, ಜ್ಞಾನ ಮತ್ತು ಸ್ವಾತಂತ್ರ್ಯದ ಮೂಲಕ ಸಬಲೀಕರಣದ ಮಾರ್ಗವನ್ನು ತೋರಿಸಿಕೊಟ್ಟಿತು. ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ ಮೊದಲಾದ ಶರಣೆಯರ ವಚನಗಳ ಮೂಲಕ ಸ್ತ್ರೀ ಸಬಲೀಕರಣದ ಆಶಯಗಳನ್ನು ಬಸವಣ್ಣನವರು ಬೆಂಬಲಿಸಿದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯ ಮಹತ್ವವನ್ನು ಸಾರಿದರು. ಮಹಿಳೆಯರೂ ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹ ನೀಡಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಆಟೋ ಚಾಲಕರಿಂದ ಗಣರಾಜ್ಯೋತ್ಸವ ಆಚರಣೆ
“ಬಸವಣ್ಣನವರ ಸ್ತ್ರೀ ಸಬಲೀಕರಣದ ಪರಿಕಲ್ಪನೆಯು ಆ ಕಾಲದ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿತು ಮತ್ತು ಲಿಂಗ ಸಮಾನತೆಯ ತಳಹದಿಯನ್ನು ಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು. ಸ್ತ್ರೀಗೆ ಸಮಾನತೆ ಕಲ್ಪಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡ 12ನೇ ಶತಮಾನದ ಬಸವಾದಿ ಶಿವಶರಣರು ಹೆಣ್ಣನ್ನು ಆತ್ಮಿಕ ನೆಲೆಯಲ್ಲಿ ಗುರುತಿಸಿ ಸಾಕ್ಷಾತ್ ದೇವತೆ ಎಂದು ಗೌರವಿಸಿದರು. 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಭಾಗವಾಗಿ, ಸ್ತ್ರೀಯರಿಗೆ ಪುರುಷರಂತೆಯೇ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ನೀಡುವಲ್ಲಿ ಬಸವಣ್ಣನವರು ಪ್ರಮುಖ ಪಾತ್ರ ವಹಿಸಿದರು. ಶರಣೆಯರ ವಚನಗಳ ಮೂಲಕ ಸ್ತ್ರೀ ಸ್ವಾತಂತ್ರ್ಯ, ಅರಿವು ಮತ್ತು ಸ್ವಾವಲಂಬನೆಗೆ ಒತ್ತು ನೀಡುವುದರ ಮೂಲಕ ಸ್ತ್ರೀ ಸಬಲೀಕರಣಕ್ಕೆ ಶ್ರಮಿಸಿದರು” ಎಂದರು.
ಶ್ರೀ ವೀರೇಶ್ವರ ವಿಶ್ವಸ್ಥ ಸಂಸ್ಥೆಯ ಪದಾಧಿಕಾರಿಗಳು, ಬಸವ ಕೇಂದ್ರದವರು ಇದ್ದರು.





