ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್ ಜಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಫೆ.26ರಂದು ಬೆಳಗ್ಗೆ 10 ಗಂಟೆಗೆ ಬೆರಗು ಪ್ರಕಾಶನ ಕೊಡಮಾಡುವ ಈ ವರ್ಷದ ʼಬೆರಗು ಪ್ರಶಸ್ತಿʼ ಪ್ರದಾನ ಸಮಾರಂಭ ಹಾಗೂ 25 ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಸಮಾರಂಭ ಉದ್ಘಾಟಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಮಾನಸ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಪುಸ್ತಕಗಳನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಬಿಡುಗಡೆ ಮಾಡುವವರಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆನಿರ್ದೇಶಕ ಪ್ರೊ. ಎಚ್ ಟಿ ಪೋತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಸಿಂದಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್ ಎಸ್ ಹಳೇಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ಕತ್ತಿ, ಪ್ರಾಚಾರ್ಯ ಎ ಆರ್ ಹೆಗ್ಗನದೊಡ್ಡಿ ಗೌರವ ಉಪಸ್ಥಿತಿ ವಹಿಸಿಕೊಳ್ಳುವರು ಎಂದು ಬೆರಗು ಪ್ರಕಾಶನ ತಿಳಿಸಿದೆ.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ
ಪ್ರಶಸ್ತಿಗೆ ಆಯ್ಕೆಯಾದವರ ವಿವರ:
ದಿವಂಗತ ಎಂ ಸಿ ಮನಗೂಳಿ ಸ್ಮರಣಾರ್ಥ ದತ್ತಿ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ- ಅಂಕಿತ ಪ್ರಕಾಶನ ಬೆಂಗಳೂರು, ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ- ಕಲಬುರಗಿಯ ಸಾಹಿತಿ ಶ್ರೀಶೈಲ ನಾಗರಾಳ, ಪ್ರೊ. ಎಚ್ ಟಿ ಪೋತೆ ರಾಜ್ಯಮಟ್ಟದ ಹಸ್ತಪ್ರತಿ ಪುರಸ್ಕಾರ ಪ್ರಶಸ್ತಿ-ಅನುವಾದಿತ ಕೃತಿ ‘ಯುದ್ಧಮೃದಂಗ'(ಲೇಖಕ ದೇವೂ ಮಾಕೊಂಡ ಸಿಂದಗಿ), ದಿವಂಗತ ಯಮುನಾ ಬಾಯಿ ರಾಜಣ್ಣಭೋವಿ ಸ್ಮರಣಾರ್ಥದತ್ತಿ ರಾಜ್ಯಮಟ್ಟದ ಬೆರಗು ಪುಸ್ತಕ ಪ್ರಶಸ್ತಿ- ಕೃತಿ ‘ಅಪ್ಪನ ಆಟೋಗ್ರಾಫ್’ (ಲೇಖಕ ಅನಂತ ಕುಣಿಗಲ್ ತುಮಕೂರು), ಶಂಕರ ಬೈಚಬಾಳ ರಾಜ್ಯಮಟ್ಟದ ಸೃಜನೇತರ ಸಾಹಿತ್ಯ ಪ್ರಶಸ್ತಿ- ಕೃತಿ ʼಸಮುದ್ರ ತೆರೆಸರಿಸಿʼ (ಲೇಖಕಿ ಪದ್ಮಿನಿ ನಾಗರಾಜು ಬೆಂಗಳೂರು), ಕೃತಿ-ಸುರದೇನು (ಲೇಖಕ ಮಹಾದೇವ ಬಸರಕೋಡ ಬಾಗಲಕೋಟೆ), ಪ್ರೊ. ಎಚ್ ಟಿ ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ- ಕೃತಿ ʼಲಚಮವ್ವ ಮತ್ತು ಇತರೆ ಕತೆಗಳುʼ (ಲೇಖಕಿ ಸುಜಾತಾ ಚಲವಾದಿ ತಾಳಿಕೋಟೆ).





