ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ದಾಳಿ ಮೇಲೆ ದಾಳಿ ಮಾಡುತ್ತಿವೆ. ಇತ್ತ ಆತಂಕದಲ್ಲಿರುವ ಸ್ಥಳೀಯರು ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.
15 ದಿನಗಳ ಹಿಂದೆ ಸುಮಾರು 30 ರಿಂದ 40 ಬೀದಿ ನಾಯಿಗಳು ಕಚ್ಚಿದ್ದರಿಂದ ಎರಡು ಹಸುಗಳು ಮೃತಪಟ್ಟಿವೆ. ಒಂದು ಮಗುವಿಗೂ ಕಚ್ಚಿ ಗಾಯಗೊಳಿಸಿವೆ. ಹೀಗಾಗಿ ನಾಯಿಗಳ ದಾಳಿಯಿಂದ ಕಡನಿ ಆಗಸಿ ಭಾಗದ ನಿವಾಸಿಗಳು ತೀವ್ರ ಆತಂಕಗೊಂಡಿದ್ದಾರೆ. ಜನವರಿ 30ರಂದು ಆಸ್ಪಕ್ ಸಾಲ್ವೋಟಗಿ ಅವರ ಜಮೀನಿನಲ್ಲಿ ಆಕಳು ಮೇಲೆ ದಾಳಿ ಮಾಡಿವೆ. ಈ ಬಗ್ಗೆ ಪಟ್ಟಣ ಪಂಚಾಯತಿಗೆ ಮಾಹಿತಿ ನೀಡಲಾಗಿದೆ. ಒಂದೇ ವಾರದಲ್ಲಿ ಮತ್ತೊಂದು ಆಕಳು ಮೇಲೆ ದಾಳಿ ಮಾಡಿ ಸಾಯಿಸಿವೆ. ಫೆ.19ರಂದು ಸಂಜೆ 6 ಗಂಟೆಗೆ ಮನೆ ಮುಂದೆ ಕುಳಿತಿದ್ದ ಖಾಸಿಂ ಸಾಲೋಟಗಿ ಅವರ ಮಗುವಿನ ಮೇಲೆ ಬಂದೆರಗಿ ಕಚ್ಚಿ ಗಾಯಗೊಳಿಸಿವೆ. ನಾಯಿ ಕಚ್ಚುತ್ತಿದ್ದಂತೆ ಭಯಗೊಂಡು ಮಗು ಕಿರುಚಾಡಿದ ತಕ್ಷಣ ಪಾಲಕರು ಮಗು ರಕ್ಷಿಸಿದ್ದಾರೆ. ಶುಕ್ರವಾರ ಮಗುವಿನೊಂದಿಗೆ ತಹಶೀಲ್ದಾರರ ಕಚೇರಿಗೆ ತೆರಳಿದ ಪಾಲಕರು ಘಟನೆ ಬಗ್ಗೆ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳಲು ವಿನಂತಿಸಿದ್ದಾರೆ.
ಬೀದಿ ನಾಯಿಗಳ ನಿರ್ವಹಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಕೋರ್ಟ್ ನಿರ್ದೇಶನ ನೀಡಿದ್ದರೂ ಆಲಮೇಲ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳು ದಾಳಿ ಮಾಡಿದ್ದ ಬಗ್ಗೆ ಅವರ ಗಮನಕ್ಕೆ ತಂದರೂ, ನೀವು ಸುರಕ್ಷತೆ ಮಾಡಿಕೊಂಡಿರಬೇಕು ಎನ್ನುತ್ತಾರೆ ಎಂದು ಮಗುವಿನ ಪಾಲಕರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ
ಸಮುದಾಯದ ಆರೋಗ್ಯ ಕೇಂದ್ರ ವ್ಯಾಪ್ತಿಯ ಸುಮಾರು 43 ಗ್ರಾಮಗಳಲ್ಲಿ ನಾಯಿ ಕಡಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ಒಂದೇ ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಬೀದಿ ನಾಯಿಗಳನ್ನು ಹಿಡಿದು ಒಂದೆಡೆ ಕೂಡಿಹಾಕಿ ಅವುಗಳಿಗೆ ಆಹಾರ, ಚುಚ್ಚುಮದ್ದುಗೊಳಿಸುವುದು ಸೇರಿದಂತೆ ಅವುಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಸುರೇಶ ನಾಯಕ ತಿಳಿಸಿದರು.





