ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಶನಿವಾರ 18ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಧರಣಿ ನಿರತರು ತಮ್ಮ ಪಟ್ಟು ಸಡಿಲಿಸದೆ ಹೋರಾಟ ಮುಂದುವರೆಸಿದ್ದಾರೆ.
ಧರಣಿನಿರತರು, ಮಲ್ಲೇಶ್ವರ ಬಳಿಯ ಪ್ರಜಾಸೌಧ ನಿರ್ಮಾಣ ಸಾರ್ವಜನಿಕ ಹಿತ ದೃಷ್ಟಿಗೆ ಪ್ರತಿಕೂಲವಾಗಿದೆ. ಆದ್ದರಿಂದ ಅದನ್ನು ಪಟ್ಟಣದಲ್ಲಿ ಸರ್ಕಾರಿ ಸ್ಥಳದಲ್ಲಿಯೇ ನಿರ್ಮಿಸಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಫಲ ಪ್ರಯತ್ನದ ನಂತರ ಉಪ ವಿಭಾಗಾಧಿಕಾರಿಯವರು ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಧರಣಿ ನಿರತರು ಸ್ಥಳ ಬದಲಾವಣೆಯ ಸಮಸ್ಯೆ ಶೀಘ್ರವಾಗಿ ಪರಿಹಾರವಾಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | ಏ.10ರಿಂದ ರಾಜ್ಯಮಟ್ಟದ ಪುಸ್ತಕ ಮೇಳ
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ದಶರಥ ಸಿಂಗ್ ಮನಗೂಳಿ, ಪದಾಧಿಕಾರಿಗಳಾದ ಎಸ್ ಬಿ ಕಟ್ಟಿಮನಿ, ಮುತ್ತಪ್ಪ ಚಮಲಾಪುರ,ಮಾಸು ಕೆಂಭಾವಿ, ಕಾಶಿನಾಥ ಮುರಾಳ, ವಿಜಯ ಸಿಂಗ ಹಜೇರಿ ಪರಶುರಾಮ ತಂಗಡಗಿ, ಗಂಗಾಧರ ಕಸ್ತೂರಿ, ಮೈಬೂಬ ಚೋರಗಸ್ತಿ, ನಾಗೇಶ ಕಟ್ಟಿಮನಿ,ದೇವೇಂದ್ರ ಹಾದಿಮನಿ,ಪ್ರಕಾಶ ಹಜಾರೆ, ಸುರೇಶ ಹಜಾರೆ, ಮಹೇಶ ಚಲವಾದಿ, ರವಿ ಕಟ್ಟಿಮನಿ, ಅಮಿತಾ ಸಿಂಗ ಮನಗೂಳಿ, ರಥಾನದಾದ,ತಸಿಲ್ದಾರರಾದ ವಿನಾಯ ಹೂಗಾರ ಪಿಎಸ್ಐ ಸೇರಿದಂತೆ ಇತರರು ಇದ್ದರು.





