ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ 2026ರ ಜನವರಿ 1ಕ್ಕೆ 106ನೇ ದಿನ ಪೂರೈಸಿದ್ದು, ಅಹೋರಾತ್ರಿ ಧರಣಿಗೆ 18ನೇ ದಿನದ ಹಿನ್ನೆಲೆ ಪ್ರತಿಭಟನಾಕಾರರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರ ಮನೆ ಎದುರು ಧರಣಿ ನಡೆಸಿ ಮನವಿ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಹೋರಾಟಗಾರರನ್ನು ಬಂಧಿಸಿರುವುದನ್ನು ವಿರೋಧಿಸಿ ಜನ ವೇದಿಕೆ ಸಂಘಟನೆಯಿಂದ ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರ್ ಮುಖಾಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದರು.
“ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಉದ್ದೇಶಿಸಿರುವ ಪಿಪಿಪಿ ಮಾದರಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ವಿರೋಧಿಸಿ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು ಆಗ್ರಹಿಸಿ 2025ರ ಸೆಪ್ಟೆಂಬರ್ 18ರಿಂದ ಅನಿರ್ಧಿಷ್ಟ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆದಿದೆ. ಹೋರಾಟಗಾರರು ಮುಂಚಿತವಾಗಿಯೇ ಸಂಬಂಧಿಸಿದ ಆದರ್ಶ ನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು. ಜತೆಗೆ ಪತ್ರಿಕಾ ಪ್ರಕಟಣೆ ನೀಡಿ ಹೋರಾಟ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದರು” ಎಂದು ಜನ ವೇದಿಕೆ ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಬೆಳಿಗ್ಗೆ 10.30ಕ್ಕೆ ಸೋಲಾಪುರ ರಸ್ತೆಯ ಮುಗಳಖೋಡ ಮಠದ ಹತ್ತಿರ ಹೋರಾಟಗಾರರು ಸೇರಿ ಪ್ರತಿಭಟನೆ ಪ್ರಾರಂಭಿಸುವ ನಿರ್ಧಾರವಾಗಿತ್ತು. ರಸ್ತೆಯ ಬದಿಯಲ್ಲಿ ಶಾಂತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಹೋರಾಟದಲ್ಲಿ ನೂರಾರು ಜನರು ಸೇರಿದ್ದರು. ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಹೋರಾಟಗಾರರನ್ನು ಪ್ರಚೋದಿಸಿದರು. ಆಗ ಸಣ್ಣ ಪುಟ್ಟ ನೂಕಾಟ, ತಳ್ಳಾಟ ಸಂಭವಿಸಿತು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸಿದರು. ಹೋರಾಟಗಾರರ ಮೇಲೆ ಮೃಗಗಳಂತೆ ವರ್ತಿಸಿದರು. ನಂತರ ಎಲ್ಲ ಹೋರಾಟಗಾರರನ್ನು ಬಂಧಿಸಿ ಕರೆದುಕೊಂಡು ಹೋದರು. ಇದು ನಿಜಕ್ಕೂ ಹೋರಾಟಗಾರರಿಗೆ ಮತ್ತು ವಿಜಯಪುರ ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯವಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ| ಮಲಗುಂಡಿ ಸ್ವಚ್ಛತೆಗೊಳಿಸುವ ಪದ್ಧತಿ ನಿಷೇದವಿದ್ದರೂ ಇನ್ನೂ ಜೀವಂತ
“ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಆದ್ದರಿಂದ ಶೀಘ್ರದಲ್ಲಿ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಮೂಲಭೂತ ಹಕ್ಕಾಗಿದೆ. ಅದನ್ನು ಮೊಟಕುಗೊಳಿಸುವ ಹುನ್ನಾರವನ್ನು ಕೈಗೆ ಬಿಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜನ ವೇದಿಕೆಯ ಜಿಲ್ಲಾ ಸದಸ್ಯರಾದ ಮುದ್ದುರಾಜ ಎಸ್ ಎಂ, ಶರಣಗೌಡ ಒನಿಕ್ಯಾಳ, ಅಮೃತಾ ಬಿರಾದಾರ, ಪಾಮಿದ ಗುತ್ಯಾಳ, ಬಾನುಬಿ ತಹಶೀಲ್ದಾರ್, ಲಕ್ಷ್ಮಿ ಯರಗಲ್, ಶಾಂತಮ್ಮ ಹೊಸಮನಿ, ಶೈರಾಬಾನು ಮುದ್ದೇಬಿಹಾಳ ಇದ್ದರು.





