ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ನೋಟಿಸ್ ಕೂಡ ನೀಡದೇ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವ ನಡೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, “ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ 12 ದಲಿತ ಕುಟುಂಬಗಳು ಸುಮಾರು ತಿಂಗಳುಗಳಿಂದ ಸರ್ಕಾರಿ ಗಾವಟಾನ್ ಜಾಗದಲ್ಲಿ ಶೆಡ್ಡು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದವು. ಅಲ್ಲಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪ್ರಭಾರ ತಹಶೀಲ್ದಾರರು ಹಾಗೂ ಪೊಲೀಸ್ ಇಲಾಖೆಯವರು ಕೂಡಿಕೊಂಡು ನೋಟಿಸ್ ನೀಡದೆ ಅವರ ಶೆಡ್ಡುಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ. ಅಲ್ಲಿರುವ ದಲಿತ ಕುಟುಂಬಗಳು ಬೀದಿಯಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಅದೇ ಜಾಗದಲ್ಲಿ ಸುಮಾರು 12-13 ದಿನಗಳಿಂದ ದಲಿತ ಕುಟುಂಬಗಳು ಬೀದಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರೂ ಸಹ ಯಾವ ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಬಂದಿರುವುದಿಲ್ಲ. ದಲಿತರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ” ಎಂದು ಆರೋಪಿಸಿದರು.
“ದಲಿತ ಕುಟುಂಬಗಳಿಗೆ ವಾಸ ಮಾಡಲು ಅನುಕೂಲ ಮಾಡಿಕೊಡಬೇಕು ಹಾಗೂ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ದಲಿತ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ರೋಹಿತ್ ವೇಮುಲ ಕಾಯ್ದೆ ಜಾರಿಗೆ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮನವಿ
ಈ ವೇಳೆ ರಾಜ್ಯ ಮಹಿಳಾ ಮಹಿಳಾ ಸಂಚಾಲಾಕಿ ಪ್ರತಿಭಾ ಹೊಸಮನಿ, ಚೇತನ್ ತೋರವಿ, ಭೀಮು ಉತ್ತನಾಳ, ಸವಿತಾ ವಗ್ಗರ, ಮಹಾಂತೇಶ ರಾಠೋಡ, ವಿಜಯಿ ಮೆತ್ರಿ, ದಿಲೀಪ್ ರಣದೇವಿ ಹಾಗೂ ಶಂಕರ ಛಲವಾದಿ ಇದ್ದರು.





