ನೀರಾವರಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಜೈನಾಪುರ ಗ್ರಾಮದಲ್ಲಿ ಶನಿವಾರ ನಡೆದ ಲಕ್ಷ್ಮಿದೇವಿ, ಈಶ್ವರ, ನಂದಿ ಮತ್ತು ಮಾರುತೇಶ್ವ ದೇವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ಯುಕೆಪಿ 3ನೇ ಹಂತದ ಭೂಸ್ವಾಧೀನವಾಗಲಿರುವ ಜಮೀನುಗಳ ರೈತರಿಗೆ ಒಪ್ಪಂದದಂತೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ಕೆ ಬಾಗಲಕೋಟೆಯಲ್ಲಿ ಚಾಲನೆ ನೀಡಲಾಗಿದೆ. ಈ ಮೂಲಕ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಜೈನಾಪುರ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಯಲ್ಲಿಯೇ ಸರ್ಕಾರ ಬಡವರು, ರೈತರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿ ಮಾಡಿದೆ. ಮಮದಾಪುರ ಹೋಬಳಿಗೆ ಅಭಿವೃದ್ಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಸಂಸ್ಕೃತಿ, ಪ್ರಕೃತಿ ಮತ್ತು ದೈವಾರಾಧನೆಗಳೂ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಹೊಳೆಜೈನಾಪುರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಗ್ರಾಮಸ್ಥರ ದೈವಭಕ್ತಿಗೆ ಸಾಕ್ಷಿಯಾಗಿದೆ” ಎಂದು ಸಚಿವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗೊರವನಹಳ್ಳಿ | ಮೂಟೆಗಳಲ್ಲಿ ದಾಖಲೆಗಳನ್ನೊಯ್ದ ಗ್ರಾ.ಪಂ ಅಧಿಕಾರಿಗಳು: ತಡೆಯಲೆತ್ನಿಸಿದ ಮುಖಂಡರ ಬಂಧನ
ಇದೇ ವೇಳೆ ಗ್ರಾಮಸ್ಥರು ಸಚಿವ ಎಂ ಬಿ ಪಾಟೀಲ ಅವರನ್ನು ಬಾಳೆಹಣ್ಣುಗಳಿಂದ ತುಲಾಭಾರ ನಡೆಸುವ ಮೂಲಕ ಧನ್ಯತೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಮುಖಂಡರಾದ ಪ್ರಶಾಂತ ಹಿರೇದೇಸಾಯಿ, ಜಗನ್ನಾಥ ಹಿರೇದೇಸಾಯಿ, ಭೀಮಶಿ ನಾಗರಾಳ, ಬಸಪ್ಪ ಕೊಡೆಕಲ್, ಶ್ರೀನಿವಾಸ ನಿಡೋಣಿ, ಅಮೀನ ಬಿದರಿ, ಲಕ್ಕಪ್ಪ ಅಂಬಿಗೇರ, ಮುತ್ತಪ್ಪ ಮಂಟೂರ, ದೇವಸ್ಥಾನದ ಪ್ರಮುಖರು, ಗ್ರಾಮಸ್ಥರು, ಹಿರಿಯರು, ಮಹಿಳೆಯರು, ಯುವಕರು ಇದ್ದರು.





