ಋಣಾತ್ಮಕ ಚಿಂತನೆಗಳಿಂದ ದೂರವಿದ್ದು, ಧನಾತ್ಮಕ ಆಲೋಚನೆಗಳಿಂದ ಬದಕನ್ನು ಕಟ್ಟಿಕೊಳ್ಳಬೇಕು ವಿಜಯಪುರದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ನಡೆದ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಮಹತ್ವ, ಉಪನ್ಯಾಸಕರ ಜ್ಞಾನಶಕ್ತಿ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರಗಳ ಕುರಿತು ವಿವರಿಸಿದರು. ಉಪನ್ಯಾಸಕರು ಅಪಾರ ಪರಿಶ್ರಮದೊಂದಿಗೆ ಆಧುನಿಕ ವಿಜ್ಞಾನ, ತಂತ್ರಜ್ಞಾನ ಹಾಗೂ ಅಂತರ್ಜಾಲವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣವರ ಮಾತನಾಡಿ, “ಉಪನ್ಯಾಸಕರ ಜ್ಞಾನಾರ್ಜನೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಗಮನ ಹಾಗೂ ಅವಧಾನವನ್ನು ಕೇಂದ್ರೀಕರಿಸುವಂತೆ ಪರಿಣಾಮಕಾರಿ ಬೋಧನಾ ವಿಧಾನಗಳ ವಿವಿಧ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ ಜಿ ತಡಸದ ಮಾತನಾಡಿ, “ಶಿಕ್ಷಕರು ಉತ್ತಮ ಮಾರ್ಗದರ್ಶಕರಾಗಿ ಪಾಠದ ಜತೆಗೆ ಮಾನವೀಯ ಮೌಲ್ಯಗಳು, ಶಿಸ್ತು ಮತ್ತು ಸಂಯಮವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಉತ್ತಮ ಸಂವಹನ, ಸ್ನೇಹಪೂರ್ಣ ಮನೋಭಾವ, ಸೃಜನಶೀಲ ಬೋಧನೆ, ಪಾಠದ ಪೂರ್ವಸಿದ್ಧತೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಶ್ನಿಸಲು ಅವಕಾಶ ನೀಡುವುದು ಅಗತ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಮಾತನಾಡಿ, “ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಾಠ ಬೋಧಿಸುವವರಷ್ಟೇ ಅಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ, ನೈತಿಕ ಮೌಲ್ಯಗಳು, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಶಿಲ್ಪಿಗಳಾಗಿದ್ದಾರೆ. ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಮಾರ್ಗದರ್ಶನ ಅನಿವಾರ್ಯವಾಗಿದ್ದು, ಅವರ ಪ್ರೇರಣೆ ಮತ್ತು ಪರಿಶ್ರಮದಿಂದಲೇ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ದಾರಿಯನ್ನು ಹಿಡಿಯುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ ಪರಿಷ್ಕರಣೆ, ಶೀಘ್ರವೇ ಅನುಷ್ಠಾನ: ಸಚಿವ ಶಿವಾನಂದ ಎಸ್
ಕಾರ್ಯಕ್ರಮದ ಸಂಯೋಜಕಿ ಡಾ. ಮೆಹರಾಜಬೇಗಂ ಸೈಯ್ಯದ, ಡಾ.ರೇಖಾ ಗಣಿಹಾರ, ಬೋಧಕರು ಮತ್ತು ಬೋಧಕೇತರರು ಇದ್ದರು. ಸಾವಿತ್ರಿ ಪ್ರಾರ್ಥಿಸಿದರು. ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ಚಲುವರಾಜು ವಂದಿಸಿದರು. ಡಾ. ಜಕ್ಕವ್ವ ವಠ್ಠಾರ ನಿರೂಪಿಸಿದರು.





