ವೈದ್ಯಕೀಯ ವೃತ್ತಿಯಲ್ಲಿ ಅಭ್ಯಾಸ ಮಾಡಲು ನ್ಯಾಯಸಮ್ಮತ ಅಂಶಗಳನ್ನು ಗಮದಲ್ಲಿಡಬೇಕು. ಇಲ್ಲದಿದ್ದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ. ಅರುಣ ಚಂ. ಇನಾಮದಾರ ತಿಳಿಸಿದರು.
ವಿಜಯಪುರ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಕಾನೂನು ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
“ನ್ಯಾಯಸಮ್ಮತವಾಗಿ ಅಭ್ಯಾಸ ಮಾಡಲು ಐದು ಪ್ರಮುಖ ನ್ಯಾಯಾಂಗ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಅವುಗಳೆಂದರೆ ಗ್ರಾಹಕರ ಹಕ್ಕುಗಳ ಸಂಬಂಧ ಭಾರತೀಯ ವೈದ್ಯಕೀಯ ಸಂಘದ ವಿರುದ್ಧ ಶಾಂತಾ ಕೇಸ್, ಕ್ರಿಮಿನಲ್ ನಿರ್ಲಕ್ಷ್ಯ ಮಾನದಂಡ ಸಂಬಂಧ ಜಾಕೋಬ್ ಮ್ಯಾಥ್ಯೂ ಪ್ರಕರಣ, ಮಾಹಿತಿಯುಕ್ತ ಒಪ್ಪಿಗೆಗೆ ಪೂರಕವಾಗಿ ಸಮಿರಾ ಕೊಹ್ಲಿ ಪ್ರಕರಣ, ಅವಧಿಯ ನಂತರದ ಆರೈಕೆ ಮತ್ತು ದಯಾಮರಣದ ಬಗ್ಗೆ ಇರುವ ಅರುಣಾ ಶಾನ್ಬಾಗ್ ಪ್ರಕರಣ ಹಾಗೂ ಪರಿಹಾರ ಮತ್ತು ಹೊಣೆಗಾರಿಕೆ ಬಗ್ಗೆ ಇರುವ ಕುನಾಲ್ ಸಹಾ ಪ್ರಕರಣಗಳಿವೆ. ಅಲ್ಲದೇ, ಇವುಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಸೇವೆ ಮಾಡಬೇಕು” ಎಂಬುದರ ಕುರಿತು ಸೂಕ್ತ ವಿವರಣೆ ನೀಡಿದರು.
ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯ ನಿರ್ದೇಶಕ ಪ್ರೊ. ಸಿ ಎಸ್ ಪಾಟೀಲ ಮಾತನಾಡಿ, “ವೈದ್ಯಕೀಯ ವೃತ್ತಿ ಒಂದು ಶ್ರೇಷ್ಠ ವೃತ್ತಿಯಾಗಬೇಕೇ ಹೊರತು, ಅದು ಒಂದು ವ್ಯವಹಾರವಾಗಬಾರದು. ಕಾನೂನಿನ ಅರಿವು ಹೊಂದಿರಬೇಕು” ಎಂದು ಹೇಳಿದರು.
ಸಂಶೋಧನೆ ವಿಭಾಗದ ಮುಖ್ಯಸ್ಥ ಡಾ. ರೇವಯ್ಯ ಒಡೆಯರ ಪ್ರಾಸ್ತಾವಿಕವಾಗಿ ಮಾತನಾಡಿ, “2005ರಲ್ಲಿ ಪ್ರಾರಂಭವಾದ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಕಾನೂನಿನಲ್ಲಿ ಹೊಸಹೊಸ ಆವಿಷ್ಕಾರಗಳು ಹಾಗೂ ಅನ್ವೇಷಣೆಯನ್ನು ಮಾಡುತ್ತ ಬಂದಿದೆ” ಎಂದು ತಿಳಿಸಿದರು.
ಬಳ್ಳಾರಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈ ಸಿ ಮಾತನಾಡಿ, “ಬೌದ್ಧಿಕ ಸ್ವತ್ತು ಹಕ್ಕು ಮತ್ತು ವೈದ್ಯಕೀಯ ಸ್ವಾಯತ್ತತೆಯ ನಡುವಿನ ಸಮತೋಲನ ಅತಿ ಮುಖ್ಯವಾಗಿದೆ” ಎಂದು ಹೇಳಿದರು.
ಗೋವಾದ ವಿ ಎಂ ಸಲ್ಗವ್ಕರ ಕಾಲೇಜ್ ಆಫ್ ಲಾ ಸಹಪ್ರಾಧ್ಯಾಪಕ ಡಾ. ಬಾಬುಗೌಡ ಪಾಟೀಲ, ಅವರು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ- 2019ರ ಪಾತ್ರ ಕುರಿತು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಜಿ.ಪಂ ಉಪ ಕಾರ್ಯದರ್ಶಿ ಭೇಟಿ: ರಸ್ತೆ, ಬ್ರಿಡ್ಜ್ ಕಾಮಗಾರಿ ಪರಿಶೀಲನೆ
ಗದಗ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ಪವನ ಕುಮಾರ ಪಾಟೀಲ ಮಾತನಾಡಿ, “ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಕಾನೂನಿನ ಸುಧಾರಣೆ: ನಿಯಂತ್ರಣಾತ್ಮಕ ದೃಷ್ಟಿಕೋನ ಮಹತ್ವದ್ದಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜಿನ ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.
ಈ ವಿಚಾರ ಸಂಕೀರ್ಣದಲ್ಲಿ ಹಲವಾರು ಸ್ಪರ್ಧಿಗಳು ಪ್ರಬಂಧ ಮಂಡಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಆರ್ ಜಿ ಕುಲಕರ್ಣಿ ಸ್ವಾಗತಿಸಿದರು. ಸನಾ ಕೌಸರ್ ಮೊಘಲಾಯಿ ವಂದಿಸಿದರು. ಲಾವಣ್ಯ ಕುಲಕರ್ಣಿ, ನಿಕಿತಾ ನಿರೂಪಿಸಿದರು.





