ಮನರೇಗಾ ಕಾಯ್ದೆಯನ್ನು ಮರು ಜಾರಿ ಮಾಡುವುದು ಸೇರಿದಂತೆ ಸಂಘಟಿತ, ಅಸಂಘಟಿತ ಮತ್ತು ಸ್ಕೀಮ್ ಕಾರ್ಮಿಕರನ್ನು ಒಳಗೊಳ್ಳುವ ಕಾಯ್ದೆಗಳನ್ನು ಜಾರಿಗಾಗಿ ಒತ್ತಾಯಿಸಿ ಫೆಬ್ರುವರಿ 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ ತಿಳಿಸಿದರು.
ವಿಜಯಪುರ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ದೇಶದ ದುಡಿಯುವ ಸಮಸ್ತ ಜನಗಳು ಸ್ವಯಂ ಪ್ರೇರಿತವಾಗಿ ಈ ಮುಷ್ಕರವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
“ನವ ಉದಾರವಾದಿ, ಬಂಡವಾಳ ಶಾಹಿ ಮತ್ತು ಕಾರ್ಪೋರೆಟ್ ಆಡಳಿತದಲ್ಲಿ ಕೋಮು ಸಂಬಂಧದ ದಾಳಿಯ ಸಂದರ್ಭದಲ್ಲಿ ಜನರ ಜೀವನ, ಜೀವನೋಪಾಯ ಮತ್ತು ಹಕ್ಕುಗಳ ಮೇಲಿನ ದಾಳಿ ನಿಲ್ಲಬೇಕು. ಕಾರ್ಮಿಕ ವಿರೋಧಿಯಾದ ನಾಲ್ಕು ಸಂಹಿತೆಗಳನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಭೂಸ್ವಾಧೀನ ಕಾಯ್ದೆ ರದ್ದುಪಡಿಸಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಸಾರ್ವಜನಿಕ ಕೈಗಾರಿಕೆಗಳು, ವಿದ್ಯುತ್, ಅಣು ವಿದ್ಯುತ್ ಒಳಗೊಂಡು ಮೂಲ ಸೌಕರ್ಯಗಳು, ಹಣಕಾಸು ವಲಯಗಳ ಖಾಸಗೀಕರಣ ನಿಲ್ಲಿಸಬೇಕು, ಉಚಿತ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಎಲ್ಲರಿಗೂ ಪಿಂಚಣಿ ನೀಡಬೇಕು. 6 ತಾಸಿಗೆ ಕೆಲಸ ಸೀಮಿತಗೊಳಿಸಬೇಕು. ಕೆಲಸದ ಸ್ಥಳದಲ್ಲಿ ಸುರಕ್ಷತೆ, ಉದ್ಯೋಗ ಭದ್ರತೆ ನೀಡಬೇಕು, ಭೂಮಿಯ ಹಕ್ಕನ್ನು ಖಚಿತಪಡಿಸಬೇಕು. ಇದಕ್ಕಾಗಿ ಅತಿ ಶ್ರೀಮಂತರ ಮೇಲೆ ಶೇಕಡ ಎರಡರಷ್ಟು ಸಂಪತ್ತಿನ ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಗಳನ್ನು ಹಾಕಬೇಕು. ಜನರ ಬದುಕಿನ ಹಕ್ಕುಗಳನ್ನು ಉಳಿಸಬೇಕು” ಎಂದು ಒತ್ತಾಯಿಸಿದರು.
“ಕೈಗಾರಿಕಾ ಅಪಘಾತಗಳಲ್ಲಿ ಸಾವಿರಾರು ಕಾರ್ಮಿಕರು ಸಾಯುತ್ತಿದ್ದಾರೆ. ಶ್ವಾಸಕೋಶದ ಕಾಯಿಲೆ, ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವ ದುಡಿಮೆಗಾರರನ್ನು ರಕ್ಷಿಸುವ ಬದಲು ಮತ್ತಷ್ಟು ಅವರ ರಕ್ತವನ್ನು ಹೀರಲು ಸರ್ಕಾರ ಅನುಮತಿ ನೀಡಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ವಿಬಿ-ಜಿ ರಾಮ್ಜಿ ವಿರೋಧಿಸಿ ಗ್ರಾಮೀಣ ಕಾರ್ಮಿಕರ ಮೌನ ಪ್ರತಿಭಟನೆ
ಸಿಐಟಿಯು ರಾಜ್ಯ ಉಪಾಧ್ಯಕ್ಷ ಕಾಂತ ಘಂಟಿ, ಜಿಲ್ಲಾ ಸಂಚಾಲಕ ಲಕ್ಷ್ಮಣ್ ಹಂದರಾಳ, ಅಣ್ಣಾರ ಈಳಿಗೇರಾ, ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಅಂಗನವಾಡಿ ನೌಕರರ ಸಂಘದ ಎಲ್ಲ ಅಧ್ಯಕ್ಷರಾದ ಸುನಂದ ನಾಯಕ, ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ, ಗೌರವ ಅಧ್ಯಕ್ಷೆ ಭಾರತಿ ವಾಲಿ, ಸರಸ್ವತಿ ಮಠ, ಬಿಸಿ ಊಟ ಸಂಘಟನೆಯ ಸುಮಂಗಲ ಆನಂದ ಶೆಟ್ಟಿ, ಗ್ರಾಮ ಪಂಚಾಯತಿ ನೌಕರರ ಸಂಘದ ಲಾಲ್ ಅಹಮ್ಮದ್ ಶೇಕ್, ನಿವೃತ್ತ ನೌಕರರ ಸಂಘ ಜಿಬಿ ಸುರೇಶ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಪೂಜಾರಿ, ಕಟ್ಟಡ ಕಾರ್ಮಿಕ ಸಂಘ ವೀರಣ್ಣ ಬಾಳುಂಡಗಿ, ಕರ್ನಾಟಕ ಪದ್ಮ ರೈತ ಸಂಘ ಕಾಜಾ ಸಾಬ್ ಕೋಲಾರ ಇದ್ದರು.





