ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸೇರಿದ್ದ ಚಳವಳಿಕಾರರನ್ನು ಬಂದಿಸಿದ್ದೂ ಅಲ್ಲದೆ, ಅವರನ್ನು ಜೈಲಿಗಟ್ಟಿ, ಪ್ರತಿಭಟನೆ ನಡೆಸುತ್ತಿದ್ದ ಟೆಂಟ್ ತೆರವುಗೊಳಿಸಿ ದೌರ್ಜನ್ಯ ಎಸಗಿರುವ ವಿಜಯಪುರ ಪೊಲೀಸರ ಸರ್ವಾಧಿಕಾರಿ ಕ್ರಮ ಖಂಡನೀಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ವಿಜಯಪುರ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಅದೇ ರೀತಿ, ಬಂಧಿಸಿ ಜೈಲಿಗಟ್ಟಿದ ಎಲ್ಲ ಹೋರಾಟ ಸಮಿತಿಯ ಮುಖಂಡರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಸಿಪಿಐಎಂ ಮುಖಂಡರು ಆಗ್ರಹಿಸಿದ್ದು, “ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಕ್ಕಾಗಿ ಹೋರಾಟ ನಡೆಸುವುದು ತಪ್ಪೇ? ನಾವೇನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವಾ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲದ್ದೇವಾ” ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
“ಕಳೆದ 106 ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವ( ಪಿಪಿಪಿ) ಮಾದರಿಯಲ್ಲಿ ಬೇಡವೆಂಬ ಆಗ್ರಹವನ್ನಿಟ್ಟು ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಸೇರಿ ವಿಜಯಪುರ ನಗರದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತ ಬಂದಿರುವುದು ಸರ್ಕಾರಕ್ಕೆ ತಿಳಿದಿದೆ. ಸದರಿ ಹೋರಾಟಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರು ಸಕಾರಾತ್ಮಕವಾಗಿರುವುದಾಗಿ ಹೇಳಿದ್ದೂ ಇದೆ. ಆದರೆ ಸಚಿವರು ಮತ್ತು ಸರ್ಕಾರ ಮೆಡಿಕಲ್ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರದ ಈ ವಿಳಂಬ ನೀತಿಯಿಂದ ಬೇಸತ್ತ ಹೋರಾಟ ಸಮಿತಿಯು, ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲು ಕಳೆದ 7-8 ದಿನಗಳ ಹಿಂದೆಯೆ ನಿರ್ಧರಿಸಿ ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಅಥವಾ ಉಸ್ತುವಾರಿ ಸಚಿವರು ಹೋರಾಟ ಸಮಿತಿಯ ಜತೆ ಮಾತುಕತೆ ನಡೆಸಿ ಸೌಹಾರ್ಧಯುತವಾಗಿ ಪರಿಹರಿಸಲು ಕ್ರಮವಹಿಸಬೇಕಿತ್ತು. ಆದರೆ ಹಾಗೆ ಮಾಡದೇ ಹೋರಾಟಗಳನ್ನು ಹತ್ತಿಕ್ಕುವ ಸರ್ವಾಧಿಕಾರಿ ಕ್ರಮಕ್ಕೆ ಮುಂದಾಗಿರುವುದು ಖಂಡಿತ ಅಕ್ಷಮ್ಯವಾಗಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮರ್ಯಾದೆ ಹತ್ಯೆ ಖಂಡಿಸಿ ಹೆದ್ದಾರಿ ತಡೆದು ದಲಿತಪರ ಸಂಘಟನೆಗಳು ಪ್ರತಿಭಟನೆ
“ಮುಗುಳಖೋಡ್ ಮಠದ ಹತ್ತಿರ ಸೇರಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವಾಗ, ಪೊಲೀಸ್ ಅಧಿಕಾರಿಯೊಬ್ಬರು ಸ್ವಾಮೀಜಿಯ ಮೊಬೈಲ್ ಫೋನ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿರುವುದೂ ಕೂಡ ಖಂಡನೀಯವಾಗಿದೆ. ಈ ಕಾರಣದಿಂದಾಗಿಯೇ ಅಲ್ಲಿ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ. ಮೊಬೈಲ್ ಫೋನ್ ಕಿತ್ತುಕೊಳ್ಳಲು ಯತ್ನಿಸಿದ ಅಧಿಕಾರಿಯ ಮೇಲೆ ಸೂಕ್ತ ಕ್ರಮ ವಹಿಸಬೇಕು” ಎಂದು ಸಿಪಿಐಎಂ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.





