ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಇಂದಿನಿಂದ (ಜ.11) ಜನವರಿ 20ರವರೆಗೆ ಮೈಸೂರು ಸ್ಯಾಂಡಲ್ ಸೋಪ್ ಮೇಳ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಡಿಟರ್ಜೆಂಟ್ ನಿಗಮದ ಶಾಖಾ ವ್ಯವಸ್ಥಾಪಕಿ ಸುಷ್ಮಾ ಆರ್ ತಿಳಿಸಿದರು.
ವಿಜಯಪುರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದಿನಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 9:30 ರಿಂದ ರಾತ್ರಿ 9 ರವರೆಗೆ ಶ್ರೀಗಂಧ ಎಣ್ಣೆ, ಅಗರಬತ್ತಿ, ವಿವಿಧ ಬಗೆಯ ಸೋಪ್, ಸೌಂದರ್ಯ ವರ್ಧಕ, ಸ್ಯಾಂಡಲ್ ಧೂಪ್, ಹರ್ಬಲ್ ಹ್ಯಾಂಡ್ ವಾಷ್, ಬೇಬಿ ಸೋಪ್, ವಾಷಿಂಗ್ ಬಾರ್ ಸಾಬೂನು ಸೇರಿದಂತೆ 50ಕ್ಕೂ ಹೆಚ್ಚು ಉತ್ಕೃಷ್ಟ ದರ್ಜಿಯ ಉತ್ಪನ್ನಗಳನ್ನು ಶೇ 10 ರಿಂದ 15ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಸೋಪ್ ಮೇಳದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೆಟ್ ವಿಶೇಷ ಆಕರ್ಷಣೆಯಾಗಿದೆ” ಎಂದು ತಿಳಿಸಿದರು.
ನಿಗಮದ ಪ್ರಧಾನ ವ್ಯವಸ್ಥಾಪಕ ಎಂ ಗಂಗಪ್ಪ ಮಾತನಾಡಿ, ರಾಸಾಯನಿಕ ವಸ್ತುಗಳ ಬಳಕೆ ಇಲ್ಲ, ವಸ್ತುಗಳನ್ನು ಬಳಸುವ ಗ್ರಾಹಕರಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗದಂತೆ ನೈಸರ್ಗಿಕವಾಗಿ ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದರು.
ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಇತರೆ ಉತ್ಪನ್ನಗಳಿಗೆ ಹಲವಾರು ಪ್ರಶಸ್ತಿ ಬಂದಿವೆ. ಬಾಗೋಳಿಕ ಮಾನ್ಯತೆ ಕೂಡ ಲಭಿಸಿದೆ. ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ಸಂಸ್ಥೆಯು ಹೆಚ್ಚಿನ ವಹಿವಾಟನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಂಸ್ಥೆಯ ಉತ್ಪನ್ನಗಳನ್ನು 25 ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
ಇದನ್ನೂ ಓದಿ: ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ
2023-24ನೇ ಸಾಲಿನಲ್ಲಿ ₹1571 ಕೋಟಿ ವಹಿವಾಟು ನಡೆಸಿ ಅಂದಾಜು 362 ಕೋಟಿ ದಾಖಲೆ ಲಾಭಗಳಿಸಿದೆ. 2024-25ರಲ್ಲಿ ₹1787 ಕೋಟಿ, ಶೇ 14ರಷ್ಟು ಪ್ರಗತಿಯೊಂದಿಗೆ 451 ಕೋಟಿ ಲಾಭಗಳಿಸಿದೆ. 2025-26 ರಲ್ಲಿ ಡಿಸೆಂಬರ್ ವರೆಗೆ 1484 ಕೋಟಿ ವಹಿವಾಟು ನಡೆಸಿದೆ ಎಂದು ತಿಳಿಸಿದರು.





