ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಧೈರ್ಯವಾಗಿ ಹೋರಾಡಿದ ರಾಯಣ್ಣ ಅವರು ಕೇವಲ ಒಬ್ಬ ಯೋಧನಲ್ಲ, ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ನ್ಯಾಯದ ಸಂಕೇತವಾಗಿದ್ದರು. ಅವರು ದೇಶಪ್ರೇಮಕ್ಕೆ ಹೊಸ ಅರ್ಥ ಕಲ್ಪಿಸಿದವರು ಎಂದು ವಿಜಯಪುರ ಅಕ್ಕಮಹಾದೇವಿ ವಿವಿ ಕುಲಪತಿ ಪ್ರೊ ವಿಜಯಾ ಕೋರಿಶೆಟ್ಟಿ ಹೇಳಿದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿ ದೇಶಭಕ್ತಿಗೆ ಹೊಸ ಅರ್ಥ ನೀಡಿದ ಅವರ ಬಲಿದಾನವು ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಮರವಾಗಿ ಉಳಿದಿದೆ. ರಾಯಣ್ಣ ಅವರ ಜೀವನ ನಮಗೆ ಧೈರ್ಯ, ನಿಷ್ಠೆ ಮತ್ತು ಮೌಲ್ಯಾಧಾರಿತ ಹೋರಾಟದ ಪಾಠವನ್ನು ಕಲಿಸುತ್ತದೆ. ಅನ್ಯಾಯದ ವಿರುದ್ಧ ಹೋರಾಡಲು ಅಧಿಕಾರ, ಸ್ಥಾನ ಅಥವಾ ಸಂಪತ್ತಿನ ಅಗತ್ಯವಿಲ್ಲ; ದೃಢ ಸಂಕಲ್ಪ ಮತ್ತು ದೇಶಪ್ರೇಮ ಸಾಕು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ. ವಿಶೇಷವಾಗಿ ಯುವ ಪೀಳಿಗೆಗೆ ರಾಯಣ್ಣ ಅವರ ತ್ಯಾಗ ಸ್ಪೂರ್ತಿದಾಯಕವಾಗಿದ್ದು, ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಪ್ರೇರಣೆ ನೀಡುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಜಯಪುರ | ಶರಣರ ವಿಚಾರಗಳು ಸಾರ್ವಕಾಲಿಕ ಸತ್ಯ: ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿ
ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣವರ, ಹಿಂದುಳಿದ ವರ್ಗಗಳ ಕೋಶದ ಸಂಯೋಜಕ ಡಾ.ಶ್ರೀನಿವಾಸ, ಪ್ರಾಧ್ಯಾಪಕರಾದ ಪ್ರೊ. ಪಿ ಜಿ ತಡಸದ, ಪ್ರೊ. ಓಂಕಾರ ಕಾಕಡೆ, ಪ್ರೊ. ರಾಜಕುಮಾರ ಮಾಲಿಪಾಟಿಲ್, ಡಾ. ಬಾಬು ಲಮಾಣಿ, ಪ್ರೊ. ಜ್ಯೋತಿ ಉಪಾಧ್ಯ ಮತ್ತು ವಿಶ್ವವಿದ್ಯಾನಿಲಯದ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.





