ಸಾರ್ವಜನಿಕ ಮಹತ್ತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿದೆ.
ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು, “ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹವಾಗಿದೆ. ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ” ಎಂದು ಹೇಳಿದ್ದಾರೆ.
“ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿದ್ದ ಪರಿಸರ ಸಂಬಂಧಿ ಪ್ರಕರಣದಿಂದಾಗಿ ಏನೂ ಮಾಡುವಂತಿರಲಿಲ್ಲ. ಸುಪ್ರೀಂಕೋರ್ಟಿನ ನಿರ್ಧಾರದಿಂದ ಈಗ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಈ ವಿಚಾರ ಈಗಲೂ ನ್ಯಾಯಾಂಗದ ವಿಚಾರಣೆಯಲ್ಲಿದೆ ಎನ್ನುವ ಅರಿವಿದೆ. ಆದರೂ ಇವತ್ತಿನ ನಿಲುವು ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, “ಈ ಹಿಂದಿನ ತೀರ್ಪಿನಿಂದ ವಿಮಾನ ನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ ಬಿ ಪಾಟೀಲರು ತ್ವರಿತವಾಗಿ ಕ್ರಿಯಾಶೀಲರಾಗಿ, ಕಪಿಲ್ ಸಿಬಲ್ ಅವರಂತಹ ಹಿರಿಯ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಮೂಲಕ ವಿಮಾನ ನಿಲ್ದಾಣಕ್ಕೆ ಪುನರ್ಜನ್ಮ ನೀಡಿದ್ದಾರೆ’ ಎಂದು ಹೇಳಿದರು.





