‘ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಠಿತಗೊಳ್ಳಲು ಕಾರ್ಮಿಕ ಸಂಘಗಳು ಕಾರಣ’ ಎಂಬ ಭಾರತದ ಮುಖ್ಯ ನ್ಯಾಯಾಧೀಶರ ಅಭಿಪ್ರಾಯಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತ AIUTUC ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿರುವುದಕ್ಕೆ ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಮೇಲೆ ಆಪಾದನೆ ಮಾಡಿದ ಭಾರತದ ಮುಖ್ಯ ನ್ಯಾಯಾಧೀಶರ ಬೇಜವಾಬ್ದಾರಿಯುತ ಹೇಳಿಕೆಯನ್ನು ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ನ ಅಖಿಲ ಭಾರತ ಸಮಿತಿ ಅತ್ಯಂತ ಬಲವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026ರ ಜನವರಿ 29ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಸಿಜೆಐ ಅವರ ಈ ಅಭಿಪ್ರಾಯವು ಏಕಸ್ವಾಮ್ಯ ಬಲಾಢ್ಯರ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ನಿಲುವಿನೊಂದಿಗೆ ಸ್ಪಷ್ಟವಾಗಿ ಹೋಲುತ್ತದೆ. ಈ ಮಾತುಗಳು ಮುಖ್ಯ ನ್ಯಾಯಧೀಶರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಇದು ನಮ್ಮಂತಹ ಬಂಡವಾಳಶಾಹಿ ರಾಜ್ಯದಲ್ಲಿ ನ್ಯಾಯಾಂಗವು ಸಹ ಉದ್ಯೋಗದಾತ ಮಾಲೀಕ ವರ್ಗದ ಪರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಇದರ ಬಗ್ಗೆ ನಮ್ಮ ದೇಶದ ರಾಜ್ಯ ಅಧಿಕಾರದ ಗದ್ದುಗೆಯಲ್ಲಿರುವ ಬಂಡವಾಳಶಾಹಿ ವರ್ಗಕ್ಕೆ ಅಧೀನವಾಗಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಬಲಿಷ್ಠವಾದ ಒಗ್ಗಟ್ಟಿನ ಚಳುವಳಿಗಳನ್ನು ಬೆಳೆಸುತ್ತಿರುವ ದುಡಿಯುವ ಜನರು ಜಾಗೃತರಾಗಿರಬೇಕು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ
ಕೇಂದ್ರ ಸರ್ಕಾರ ಬಹಿರಂಗಪಡಿಸಿರುವ ವಾಸ್ತವಿಕ ಸಂಗತಿಗಳ ಪ್ರಕಾರ ಮುಖ್ಯ ನ್ಯಾಯಧೀಶರ ಅಭಿಪ್ರಾಯವು ಸಮಂಜಸವಲ್ಲ. ಕಳೆದ 5 ವರ್ಷಗಳಲ್ಲಿ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಗಳಿಂದ ಉಂಟಾಗಿರುವ ಕೈಗಾರಿಕಾ ವಿವಾದಗಳು 100 ಕ್ಕಿಂತ ಕಡಿಮೆಯಿವೆ, ಆದರೆ ಅದೇ ಸಂದರ್ಭದಲ್ಲಿ ಮಾಲೀಕರಿಂದಾಗಿ 40,000 ಕ್ಕಿಂತ ಹೆಚ್ಚು ಕೈಗಾರಿಕೆಗಳು ಮುಚ್ಚಿ ಹೋಗಿವೆ ಎಂದು ಸರ್ಕಾರದ ಅಂಕಿ ಅಂಶವೇ ಹೇಳುತ್ತದೆ. ಮುಖ್ಯ ನ್ಯಾಯಧೀಶರ ಕಾರ್ಮಿಕ ವಿರೋಧಿ, ಕಾರ್ಮಿಕ ಸಂಘ ವಿರೋಧಿ, ಸರ್ಕಾರ ಪರ ಮತ್ತು ಉದ್ಯೋಗದಾತರ ಪರವಾದ ಹೇಳಿಕೆಯನ್ನು ತಿರಸ್ಕರಿಸುತ್ತಾ, ಫೆಬ್ರವರಿ 12 ರ ದೇಶಾದ್ಯಂತದ ಸಾರ್ವತ್ರಿಕ ಮುಷ್ಕರವನ್ನು ಸಂಪೂರ್ಣ ಯಶಸ್ವಿಗೊಳಿಸಲು ದೇಶದ ದುಡಿಯುವ ಜನರು ಮತ್ತು ಸಾಮಾನ್ಯ ಜನರು ತಮ್ಮ ಸಿದ್ಧತೆಗಳನ್ನು ಹೆಚ್ಚಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದಿದ್ದಾರೆ.





