2026ನೇ ಸಾಲಿನ ಡಾ.ಅಂಬೇಡ್ಕರ್ ಹಬ್ಬವನ್ನು ಏ.11 ರಿಂದ 14 ರವರೆಗೆ ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ವೇದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಸಹಭಾಗಿತ್ವ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ಆಶಯದಂತೆ ಸಮಾನತೆಯ ಅರಿವಿನ ಹಬ್ಬ ಆಯಚರಿಸಲಾಗುತ್ತಿದ್ದು, ಈ ಬಾರಿ ವಿಶಿಷ್ಟವಾಗಿ ಆಯೋಜನೆ ಮಾಡಲಾಗುತ್ತಿದೆ. ಭಾರತದ ಪ್ರಥಮ ಶಿಕ್ಷಕಿ ಜ್ಯೋತಿಬಾ ಫುಲೆ ಜನ್ಮ ದಿನಾಚರಣೆಯಿಂದ ಆರಂಭವಾಗಿದ್ದು, ಒಂದು ತಿಂಗಳವರೆಗೆ ನಿತ್ಯ ನಿರಂತರ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಅಂಬೇಡ್ಕರ್ 135ನೇ ಜನ್ಮ ದಿನಾಚರಣೆಯಂದು ಸಮಾಪ್ತಿಗೊಳ್ಳಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ವಿಶಿಷ್ಠ ಕಾರ್ಯಕ್ರಮದಲ್ಲಿ ಈ ನಾಡಿದ ಪರಮಪೂಜ್ಯರು, ಪಂಡಿತರು, ರೈತರು, ಯುವಜನತೆ, ಸಾಹಿತಿಗಳು, ಬುದ್ದಿಜೀವಿಗಳು, ಪ್ರಗತಿಪರರು, ಜನತೆ, ಸಂಘ-ಸಂಸ್ಥೆಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಲ್ಲರೂ ಜಾತಿ, ಮತ, ಪಂಥ, ಲಿಂಗಬೇಧವಿಲ್ಲದೆ ನಾಡಿನ ಸುಮಾರು 10ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ರಂಗಮಂದಿರದಲ್ಲಿ ಏ.11ರಿಂದ 14ರ ವರೆಗೆ ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಕಾರ್ಯಕ್ರಮಗಳು ಜರುಗಲಿವೆ” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, “ಕಳೆದ ವರ್ಷ ಅಂಬೇಡ್ಕರ್ ಹಬ್ಬಬನ್ನು ಮೊದಲ ಬಾರಿಗೆ ಆರಂಭಿಸಿದ್ದು, ನಾಲ್ಕು ದಿನಗಳಕಾಲ ವೈಚಾರಿಕ ಕ್ರಾಂತಿ ಮೂಡಿಸುವ ಕೆಲಸ ಆಗಿತ್ತು. ಈ ಬಾರಿಯೂ ಸಹ ಏ.11 ರಿಂದ 14ರವರೆಗೆ ಕಾರ್ಯಕ್ರಮ ಜರುಗಲಿದೆ. ಅದರ ಅಂಗವಾಗಿ ಇಂದು ಲಾಂಛನ ಬಿಡುಗಡೆ ಮಾಡಲಾಗಿದ್ದು, ಇಡಿ ದೇಶದ ಜನತೆ ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ. ಈ ಕಾರ್ಯಕ್ರಮಗಳಲ್ಲಿ ಸಂವಾದ ಗೋಷ್ಠಿಗಳು, ಯುವಜನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಚಾರಿಕ ವಿಚಾರಗಳ ಚರ್ಚೆ ನಡೆಯಲಿದೆ. ಸಮಾನತೆಯನ್ನು ಸಾವುರ ಸಲುವಾಗಿಯೇ ಪೌರ ಕಾರ್ಮಿಕರಿಂದ ಲಾಂಛನ ಬಿಡುಗಡೆ ಮಾಡಿಸಲಾಗಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಅಂಬೇಡ್ಕರ್ ಆದರ್ಶಗಳನ್ನು ಅಳವಡಿಕೊಳ್ಳಿ: ಡಾ. ಔದ್ರಾಮ್
ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಸಹಭಾಗಿ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ 135ನೇ ಜಯಂತಿ ಪ್ರಯುಕ್ತ ಅಂಬೇಡ್ಕರ ಹಬ್ಬ-2026ರ ಪೋಸ್ಟರ್ನ್ನು ಪೌರ ಕಾರ್ಮಿಕರ ಹಸ್ತದಿಂದ ಬಿಡುಗಡೆ ಮಾಡಲಾಯಿತು.
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಾದ ಲಕ್ಷ್ಮಿ ಹಿಟನಳ್ಳಿ, ಮಹಾದೇವಿ ಹಾದಿಮನಿ, ದಯಾನಂದ ಅಲಿಯಬಾದ ರವರು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಲಕ್ಷ್ಮಣ ಹಂದ್ರಾಳ, ಮಹಾದೇವ ಚಲವಾದಿ, ಬಾಲಾಜಿ ಕಾಂಬಳೆ ಇದ್ದರು.





