ಅಂಗಾಂಗ ದಾನ ಮಾಡಿದ ದಿ. ಬಲರಾಮ ಕೃಷ್ಣ ಬಾಗಲಕೋಟೆ ಅವರ ಕುಟುಂಬದ ಒಬ್ಬರಿಗೆ ಶಿಕ್ಷಣ ಅಥವಾ ಉದ್ಯೋಗ ಒದಗಿಸುವುದಾಗಿ ಬಿಎಲ್ಡಿಇ ಸಂಸ್ಥೆ ನಿರ್ಧರಿಸಿದೆ. ಜೊತೆಗೆ ಕುಟುಂಬಕ್ಕೆ ಬಿಎಲ್ಡಿಇ ಆಸ್ಪತ್ರೆಯಿಂದ ಎಲ್ ಕಾರ್ಡ್ ಸೌಲಭ್ಯ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಎಲ್ಡಿಇ ಅಧ್ಯಕ್ಷ ಎಂ ಬಿ ಪಾಟೀಲ ತಿಳಿಸಿದರು.
ವಿಜಯಪುರ ನಗರದ ಬಿಎಲ್ಡಿಇ ಟೀಮ್ಡ್ ವಿಶ್ವವಿದ್ಯಾಲಯದಲ್ಲಿ ಅಂಗಾಂಗ ದಾನಿ ಬಲರಾಮ ಬಾಗಲಕೋಟೆ ಅವರ ಕುಟುಂಬಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, “ಬಲರಾಮ ಸಾವಿನಲ್ಲೂ ಇತರರ ಬದುಕಿಗೆ ಆಸರೆಯಾಗಿದ್ದಾರೆ. ಯುವಕ ಬಲರಾಮ ಮತ್ತು ಅವರ ಕುಟುಂಬದವರ ತ್ಯಾಗ ಸ್ಮರಣೀಯ. ಅವರಿಂದಲೇ ಬಸವ ನಾಡಿನಲ್ಲಿ ಅಂಗಾಂಗ ದಾನದ ಅಭಿಯಾನ ಆರಂಭವಾಗಿದೆ” ಎಂದರು.
ʼಮಿಷನ್ ಬಲರಾಮʼ ಎಂಬ ಹೆಸರಿನಲ್ಲಿ ಅಂಗಾಂಗ ದಾನ ಜಾಗೃತಿ ಅಭಿಯಾನಕ್ಕೆ ಬಿಎಲ್ಡಿಇ ಸಂಸ್ಥೆ ನೇತೃತ್ವ ವಹಿಸಲಿದೆ. ತಾವೇ ಮೊದಲಿಗೆ ಅಂಗಾಂಗ ದಾನದ ವಾಗ್ದಾನ ಮಾಡುತ್ತಿರುವುದಾಗಿ ಎಂ ಬಿ ಪಾಟೀಲ ಘೋಷಿಸಿದರು.
ಡಾ. ಅರುಣ ಮಾತನಾಡಿ, ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೃದಯ, ಶ್ವಾಸಕೋಶ, ಯಕೃತ್ತು, ಕಿಡ್ನಿ, ಪ್ಯಾನ್ಕ್ರಿಯಾಸ್, ಕಣ್ಣು ಗುಡ್ಡೆಗಳು, ಚರ್ಮ, ಎಲುಬು, ಹೃದಯದ ವಾಲ್ವ್, ರಕ್ತನಾಳಗಳು ಹಾಗೂ ಟಿಶ್ಯೂಗಳನ್ನು ದಾನ ಮಾಡಬಹುದಾಗಿದೆ. ಅಂಗಾಂಗ ದಾನ ಜನಾಂದೋಲನವಾಗಬೇಕೆಂದು ಕರೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಸೆಸ್ನಾ 172 ತರಬೇತಿ ವಿಮಾನ ಪತನ: ವಿಮಾನದಲ್ಲಿದ್ದವರು ಪ್ರಾಣಾಪಾಯದಿಂದ ಪಾರು
ಕಾರ್ಯಕ್ರಮದಲ್ಲಿ ಬಿಎಲ್ಡಿಇ ವಿವಿ ಕುಲಪತಿ ಡಾ. ಜಯರಾಜ, ಡಾ. ವಿಜಯಕುಮಾರ ಕಲ್ಯಾಣಪ್ಪ ಗೋಳ, ಡಾ. ಎಸ್ ಬಿ ಪಾಟೀಲ, ಡಾ. ತೇಜಸ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





