ಸಂಶೋಧನಾ ಕ್ಷೇತ್ರದಲ್ಲಿ ಕೌಶಲ್ಯದ ಜೊತೆಗೆ ಒಳ್ಳೆಯ ಆದರ್ಶ ಮತ್ತು ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು ಅದು ಈ ಕ್ಷೇತ್ರಕ್ಕೆ ಬಹಳ ಮುಖ್ಯ ಎಂದು ವಿಜಯಪುರದ ಬಿಎಲ್ಡಿಇ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ ಇನಾಮದಾರ ಹೇಳಿದರು.
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಔಷಧ ಮಂಡಳಿ ಮತ್ತು ಭಾರತದ ಔಷಧ ಶಿಕ್ಷಕರ ಸಂಘದ ರಾಜ್ಯ ಶಾಖೆ ಆಯೋಜಿಸಿರುವ ಔಷಧೀಯ ಶಿಕ್ಷಣ, ಸಂಶೋಧನೆ ಮತ್ತು ಉದ್ಯಮದಲ್ಲಿ ಪ್ರಗತಿಗಳು ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಸಂಶೋಧನೆಯಲ್ಲಿ ಸಮಕಾಲೀನ ಪ್ರವೃತ್ತಿಗಳು ಮತ್ತು ಶೈಕ್ಷಣಿಕ ಹಾಗೂ ಉದ್ಯಮದ ನಡುವೆ ಪರಸ್ಪರ ಸಹಯೋಗ ಅಗತ್ಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಔಷಧ ಮಂಡಳಿ ಮತ್ತು ಭಾರತದ ಔಷಧ ಶಿಕ್ಷಕರ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ. ಎಚ್. ಶಿವಕುಮಾರ ಮಾತನಾಡಿ, ಶಿಕ್ಷಣ ಕ್ಷೇತ್ರಗಳು ಸಂಶೋಧನೆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಇಂಟಿಗ್ರೆಟಿಂಗ್ ಟ್ರೆಡಿಶನಲ್ ಆಯುರ್ವೇದ ಇಂಟಲಿಜೆನ್ಸ್ ವಿಥ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇನ್ ಪ್ಲ್ಯಾಂಟ್ ಬೇಸ್ಡ್ ಫಾರ್ಮಾಸ್ಯೂಟಿಕಲ್ ರೀಸರ್ಚ್ ಕುರಿತು ಉಪನ್ಯಾಸ ನೀಡಿದರು.
ಚೆನ್ನೈ ಭಾರತೀಯ ಪೇಟೆಂಟ್ ಕಚೇರಿ ಉಪನಿಯಂತ್ರಕ ಡಾ. ಶರಣಗೌಡ ಅವರು, ಆವಿಷ್ಕಾರಗಳನ್ನು ಸಂರಕ್ಷಿಸುವಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ಣಾಯಕ ಪಾತ್ರವನ್ನು ಹೈಲೈಟ್ ಮಾಡುವ ಮತ್ತು ಸಂಶೋಧಕರು ತಮ್ಮ ಕೆಲಸವನ್ನು ಸಂರಕ್ಷಿತ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಸ್ವತ್ತುಗಳಾಗಿ ಭಾಷಾಂತರಿಸಲು ಪ್ರೋತ್ಸಾಹಿಸುವ ಕುರಿತು ಮಾತನಾಡಿದರು.
ತುಮಕೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ ಟಿ ಸಂಪತ್ ಕುಮಾರ ಮಾತನಾಡಿ, ಔಷಧ ಅನ್ವೇಷಣೆ, ಸೂತ್ರೀಕರಣ ಅಭಿವೃದ್ಧಿ ಮತ್ತು ಡೇಟಾ-ಚಾಲಿತ ಸಂಶೋಧನೆ ವಿಧಾನ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ರೂಪಾಂತರದ ಪ್ರಭಾವದ ಕುರಿತು ವಿವರಿಸಿದರು.
ಇದನ್ನೂ ಓದಿ: ವಿಜಯಪುರ | ವೈದ್ಯಕೀಯ ನಿರ್ಲಕ್ಷ್ಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಈ ಸಂದರ್ಭದಲ್ಲಿ ವಿಜಯಪುರ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ಎಸ್., ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷ ಡಾ. ಚಂದ್ರಶೇಖರ, ವೆಂಕಟೇಶ, ಕಾಲೇಜಿನ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ವಿಚಾರ ಸಂಕಿರಣ ಸಲಹೆಗಾರ ಡಾ. ಆರ್. ಬಿ. ಕೊಟ್ನಾಳ, ಡಾ. ಎಸ್. ಜೆಡ್. ಇನಾಮದಾರ, ಸಂಘಟನಾ ಕಾರ್ಯದರ್ಶಿ ಡಾ. ಸಿ. ಸಿ. ಪಾಟೀಲ, ಡಾ. ಸುನಂದಾ, ಸುಶೀಲ ಲೋಂಧೆ, ಡಾ. ಎಸ್. ಎಸ್. ಬಿರಾದಾರ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ನಾನಾ ರಾಜ್ಯಗಳ ಔಷಧಾಲಯ ಸಂಸ್ಥೆಗಳಿಂದ 300 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.





