ವಿಜಯಪುರ ಜಿಲ್ಲೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂಒಡೆತನ ಯೋಜನೆಯಡಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ₹27.55ಲಕ್ಷ ಗಳನ್ನು ಫ್ರೀಜ್ ಮಾಡಿಸಿ ಸರ್ಕಾರಕ್ಕೆ ಮರಳಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2018-19ರಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಭೂಮಿ ಒದಗಿಸುವ ಭೂ ಒಡೆತನ ಯೋಜನೆಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ಒಟ್ಟು ಆರು ಜನರು ಕೂಡಿಕೊಂಡು ಅಕ್ರಮ ಎಸೆಗಿದ್ದರು. ಒಟ್ಟು 11 ಜನ ನಕಲಿ ಫಲಾನುಭವಿಗಳ ಹೆಸರಲ್ಲಿ ರಾಜ್ಯ ಸರ್ಕಾರಕ್ಕೆ ಮೋಸ ಮಾಡಲಾಗಿತ್ತು. ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸುಮಾರು 11 ಎಕರೆ ಭೂಮಿ ಖರೀದಿ ಮಾಡಲಾಗಿದೆ ಎಂದು ಹೇಳಿ ಬರೋಬ್ಬರಿ 75.9 ಲಕ್ಷ ರೂ ಹಣವನ್ನು ದುರುಪಯೋಗ ಮಾಡಿದ್ದರು. ಈ ಭೂ ಖರೀದಿ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಹಾಗೂ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಎಸ್ ಎಸ್ ಮಣಗಿರಿ (ನಿವೃತ್ತ ) ಹಾಗೂ ಎಂ ಟಿ ಮುಧೋಳ (ನಿಧನ ಹೊಂದಿದ್ದಾರೆ) ವಿರುದ್ಧ 2024ರಲ್ಲಿ ಜಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರಿಗೆ ಇನ್ನೂ ಮೂವರು ಸಹ ಸಾತ್ ನೀಡಿದ್ದರು. ಮೊದಲಿಗೆ ಸರ್ಕಾರದ ಅನುದಾನವನ್ನು ನಕಲಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಿ, ನಂತರ ಹಣವನ್ನು ಅವರೇ ವಿತ್ ಡ್ರಾ ಮಾಡಿಕೊಂಡಿದ್ದರು” ಎಂದು ಹೇಳಿದರು.
“2018ರ ಡಿಸೆಂಬರ್ ನಲ್ಲಿ ಮೊದಲ ಹಂತದಲ್ಲಿ 37.95 ಲಕ್ಷ ರೂಗಳ ಚೆಕ್, 2019ರ ಜನವರಿಯಲ್ಲಿ ಎರಡನೇ ಹಂತದಲ್ಲಿ 3.79 ಲಕ್ಷ ಹಾಗೂ ಮೂರನೇ ಹಂತದಲ್ಲಿ 34.15 ಲಕ್ಷ ರೂ ಬ್ಯಾಂಕ್ ಖಾತೆಯಿಂದ ಆರ್ ಟಿ ಜಿ ಎಸ್ ಮಾಡಿ ಹಣವನ್ನು ಲೂಟಿ ಮಾಡಿದ್ದರು. ಈ ಪ್ರಕರಣದಲ್ಲಿ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ ಸಹ ತನಿಖೆ ಮಾಡುತ್ತಿವೆ. ಆರ್ ಟಿ ಜಿ ಎಸ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡ ಸಂಬಂಧ ಸೈಬರ್ ಕ್ರೈಂ ಪೊಲೀಸರು ಕೂಡ ತನಿಖೆ ಕೈಗೊಂಡಿದ್ದಾರೆ. ಇದೀಗ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ₹27.55 ಲಕ್ಷ ಸರ್ಕಾರಕ್ಕೆ ಮರಳಿಸಲು ಆದೇಶ ಮಾಡುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ” ಎಂದು ಮಾಹಿತಿ ನೀಡಿದರು.
ವಿಜಯಪುರ ನಗರದ ವ್ಯಾಪಾರಿಯೊಬ್ಬರಿಗೆ ಟ್ರೇಡಿಂಗ್ ಹೆಸರಲ್ಲಿ 2.04 ಲಕ್ಷ ಹಣ ಹಾಕಿಸಿಕೊಂಡು ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು. ಈಗ ಮತ್ತೆ 65.64 ಲಕ್ಷ ರೂಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಂದ ಒಟ್ಟಾರೆ 1.35 ಕೋಟಿ ರೂಗಳನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಜ.25ರಂದು ರಾಷ್ಟೀಯ ಮತದಾರರ ದಿನಾಚರಣೆ
ಜಿಲ್ಲೆಯ ವೈದ್ಯರೊಬ್ಬರನ್ನು ಡಿವೊರ್ಸ್ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹಾಗೂ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಲಾಭ ಮಾಡಿ ಸಾಲ ತೀರಿಸುವುದಾಗಿ ಹೇಳಿ 2.15 ಕೋಟಿ ರೂ ವಂಚನೆ ಮಾಡಿರುವ ಬಗ್ಗೆ ಪ್ರಕರಣದ ದಾಖಲಾಗಿತ್ತು. ಈ ಪ್ರಕರಣದಲ್ಲೂ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, 25.11 ಲಕ್ಷ ರೂಗಳನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ವಿವರಿಸಿದರು.





