ವಿಶ್ವ ವಿದ್ಯಾಲಯಗಳು, ಕಾಲೇಜು ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ಭೇದಭಾವ ತಡೆಯಲು ಶೀಘ್ರವೇ “ರೋಹಿತ್ ವೇಮುಲ ಕಾಯ್ದೆ”ಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.
ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ, ರೋಹಿತ್ ವೇಮುಲ ಜನ್ಮದಿನದ ಅಂಗವಾಗಿ ಹಾಗೂ ಯುಜಿಸಿ ನಿಯಮಾವಳಿ 2026ಕ್ಕೆ ಆಗುತ್ತಿರುವ ವಿರೋಧ ಖಂಡಿಸಿ ಪ್ರತಿರೋಧ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಎಸ್.ಸಿ, ಎಸ್.ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಜೊತೆ ತಾರತಮ್ಯ ಸತತವಾಗಿ ನಡೆಯುತ್ತಲೇ ಇದೆ. ರೋಹಿತ್ ವೇಮುಲ ಆತ್ಮಹತ್ಯೆ ಇದಕ್ಕೆ ಉದಾಹರಣೆಯಷ್ಟೇ. ಜಾತಿ ಕಾರಣಕ್ಕೆ ಇಲ್ಲಿಂದ ಆರಂಭವಾದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಈ ಶೋಷಣೆಯಿಂದ ದೇಶಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ.
ರಾಜ್ಯದಲ್ಲಿಯೂ ಇಂತಹ ಘಟನೆ ತಡೆಗಟ್ಟಲು ರಾಜ್ಯ ಸರ್ಕಾರ ಕಳೆದ ವರ್ಷ “ರೋಹಿತ್ ವೇಮುಲ ಕಾಯ್ದೆ” ಎಂಬ ಮಸೂದೆ ರಚನೆ ಮಾಡಿದೆ. ಆದರೆ ಇದನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಶೀಘ್ರವೆ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೆ ತರಬೇಕು. ಸರ್ಕಾರ ಕಾಯ್ದೆ ಜಾರಿಗೆ ವಿಳಂಬ ನೀತಿ ಅನುಸರಿಸುತ್ತ ಸಾಗಿದರೆ, ಹೋರಾಟ ಮಾಡಲು ವಿದ್ಯಾರ್ಥಿ ಯುವಜನರು ಸಿದ್ಧರಾಗಿರಬೇಕೆಂದು ಕರೆ ಕೊಟ್ಟರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ
ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಸ್. ಸಿ, ಎಸ್.ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಭೇದಭಾವ ತಡೆಯಲು ಕೇಂದ್ರ ಸರ್ಕಾರ ಜಾರಿ ಮಾಡಿದ ಹೊಸ “ಯುಜಿಸಿ ನಿಯಮಾವಳಿ 2026″ಕ್ಕೆ ಕೆಲ ಮನುವಾದಿಗಳು ವಿರೋಧಿಸಿ ಸುಪ್ರೀಂ ಕೋರ್ಟ್ಗೆ ಹೋದ ಕಾರಣ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಇದಕ್ಕೆ ತಡೆ ನೀಡಿದೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಜೊತೆಗೆ ಈ ನಿಯಮಾವಳಿಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಸೇರಸಿ ಇದಕ್ಕೆ ರೋಹಿತ್ ವೇಮುಲ ಕಾಯ್ದೆ ಆಧಾರವಾಗಿ ಜಾರಿ ಮಾಡಬೇಕೆಂದು ಹೇಳಿದರು.
ಈ ವೇಳೆ ಮಹಾದೇವ ಚಲವಾದಿ, ಪ್ರೇಮಾ, ವಿರೇಶ, ಲತಾ ರಾಠೋಡ, ದಾವಲ್ ಅಲ್ಲದೇ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





