ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ, ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ತೋರಿರುವ ಆರ್ ಎಸ್ ಎಸ್ ಮುಖಂಡನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಮುಖಂಡರು ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ನಗರದ ಜಲನಗರದ ಬಿಡಿಎ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೋತ್ಥಾನ ಹಿಂದೂ ಸಮ್ಮೇಳನದಲ್ಲಿ RSS ಮುಖಂಡನೊಬ್ಬ, “ಈ ದೇಶ ಎಂದರೆ ಸಂವಿಧಾನವಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲ” ಎಂಬ ಅತಿರೇಕದ ಮಾತನಾಡಿದ್ದಾನೆ. ಇಂತಹ ಅಪಮಾನಕರ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಈ ಹೇಳಿಕೆಯು ದೇಶದ ಸಂವಿಧಾನ, ರಾಷ್ಟ್ರಧ್ವಜ ಹಾಗೂ ಈ ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರಿಗೆ ನೇರವಾಗಿ ಅವಮಾನ ಮಾಡುವಂತಿದ್ದು, ದೇಶದ ಏಕತೆ-ಅಖಂಡತೆಗೆ ಧಕ್ಕೆ ತರುವ ದೇಶದ್ರೋಹಿ ಮನೋಭಾವವನ್ನು ತೋರಿಸುತ್ತದೆ. ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ ಮುಖಂಡರು ಒತ್ತಾಯಿಸಿದ್ದಾರೆ.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “RSS ಮುಖಂಡರು ಸಂವಿಧಾನ, ಅಂಬೇಡ್ಕರ್ ಹಾಗೂ ರಾಷ್ಟ್ರಧ್ವಜದ ಕುರಿತು ಈ ರೀತಿಯ ಅಗೌರವಪೂರ್ವಕ ಮಾತುಗಳನ್ನು ಆಡುವ ಮೂಲಕ ದೇಶದ ಸಮಸ್ತ ಜನತೆಗೆ, ವಿಶೇಷವಾಗಿ ಅಂಬೇಡ್ಕರ್ ಅನುಯಾಯಿಗಳಿಗೆ ತೀವ್ರ ನೋವು ಉಂಟುಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹಾಳುಮಾಡುವ ಪ್ರಯತ್ನ ಮಾಡಿರುವುದು ಗಂಭೀರ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.
“ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡವರ ವಿರುದ್ಧ ಹಾಗೂ ದೇಶಕ್ಕೆ, ದೇಶದ ಮಹಾನ್ ನಾಯಕರಿಗೆ ಅಪಮಾನವಾಗುವ ರೀತಿಯಲ್ಲಿ ಭಾಷಣ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ದೇಶಪ್ರೇಮದ ಹೊಸ ಅರ್ಥವೇ ಸಂಗೊಳ್ಳಿ ರಾಯಣ್ಣ: ಪ್ರೊ. ವಿಜಯ ಕೋರಿಶೆಟ್ಟಿ
“ಜಿಲ್ಲಾಡಳಿತ ಈ ವಿಚಾರದಲ್ಲಿ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಜಿಲ್ಲೆಯ ಪ್ರಗತಿಪರ, ದಲಿತ, ಕನ್ನಡಪರ, ರೈತ, ಕಾರ್ಮಿಕ, ವಿದ್ಯಾರ್ಥಿ ಹಾಗೂ ಯುವಜನಪರ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ವ್ಯಾಪಕ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ ಚಲವಾದಿ, ಪ್ರತಾಪ, ಸಿದ್ದು, ಮಹಾಂತೇಶ್, ಹುಚ್ಚಪ್ಪ, ಸಿದ್ದಾರ್ಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.





