ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾತನ ದೋಣಿ ತಾಂಡಾ ನಿವಾಸಿಗಳು ಇಂದಿಗೂಕುಡಿಯುವ ನೀರಿಗಾಗಿ ಹೋರಾಡಬೇಕಾದ ಅನಿವಾರ್ಯತೆಯಲ್ಲಿಯೇ ಬದುಕುತ್ತಿದ್ದಾರೆ.
25ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ತಾಂಡಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ನೀರಿಗಾಗಿ ದಿನನಿತ್ಯ 3 ಕಿ.ಮೀ ದೂರದಲ್ಲಿರುವ ಅಡವಿ ಸೋಮನಾಳ ಅಥವಾ ಹಳ್ಳಕ್ಕೆ ಕೊಡ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ತಾಂಡಾದಲ್ಲಿ ಎರಡು ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ ಬರುವ ನೀರೆಲ್ಲಾ ಉಪ್ಪುಮಯವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಊರಲ್ಲಿ ಎಲ್ಲಿಯೇ ಬೋರ್ವೆಲ್ ಕೊರೆಸಿದರೂ ನೀರು ಮಾತ್ರ ಉಪ್ಪು. ಹೀಗಾಗಿ ಕಿಲೋಮೀಟರ್ಗಟ್ಟಲೇ ಅಲೆಯುವ ಅನಿವಾರ್ಯ ಸ್ಥಿತಿ ಈ ತಾಂಡಾವಾಸಿಗಳದ್ದು.
ತಾಂಡದಲ್ಲಿನ ಒಬ್ಬಂಟಿ ವೃದ್ಧೆಯೊಬ್ಬರು ಜೀವ ಕೈಯಲ್ಲಿ ಹಿಡಿದೇ ಪ್ರತಿದಿನ ಹಳ್ಳದತ್ತ ತೆರಳಿ ನೀರು ತರುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಬಿಸಿಲು, ದಾರಿ, ದೌರ್ಬಲ್ಯ ಯಾವುದನ್ನೂ ಲೆಕ್ಕಿಸದೆ ಅವರು ಹೋರಾಡಬೇಕಿದೆ. ಅಷ್ಟು ಪ್ರಯಾಸಪಟ್ಟು ಹೋದರೂ ಮನೆಗೆ ಸುರಕ್ಷಿತವಾಗಿ ವಾಪಸ್ ಆಗುತ್ತೇನೆ ಎಂಬ ಭರವಸೆಯೂ ಅವರಲ್ಲಿ ಇರುವುದಿಲ್ಲ. ಶುದ್ಧ ಕುಡಿಯುವ ನೀರು ಒದಗಿಸುವ ಹೊಣೆ ಹೊತ್ತಿರುವ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿವರೆಗೂ ಈ ಸಮಸ್ಯೆಯತ್ತ ಗಮನ ಹರಿಸದೇ ಇರುವುದರಿಂದ, ಸಂಕಷ್ಟದಲ್ಲೇ ದಿನಗಳನ್ನು ಕಳೆಯುತ್ತಿರುವ ತಾಂಡಾದ ನಿವಾಸಿಗಳು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ತಮ್ಮ ದುಃಖಕ್ಕೆ ಕಾರಣವಾದ ವ್ಯವಸ್ಥೆಯನ್ನು ಶಪಿಸುತ್ತಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಯ ಪಾಟೀಲ ಮಾತನಾಡಿ, “ಕ್ಯಾತನ ದೋಣಿ ತಾಂಡಾದ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಉಪ್ಪುನೀರನ್ನೇ ಕುಡಿಯುವ ಸ್ಥಿತಿ ತಲುಪಿದ್ದಾರೆ. ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ, ನಿವಾಸಿಗಳು ದೂರದ ಹಳ್ಳದಿಂದ ಅಶುದ್ಧ ನೀರನ್ನೇ ತಂದು ಕುಡಿಯಬೇಕಾದ ಅನಿವಾರ್ಯತೆ ಇದೆ. ತಾಂಡಾದಲ್ಲಿ ಬೋರ್ವೆಲ್ ಕೊರೆಸಲಾಗಿದ್ದರೂ, ಅದಕ್ಕೆ ಮೋಟಾರ್ ಅಳವಡಿಸದೇ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಈ ಸಮಸ್ಯೆ ಕುರಿತು ತಾವು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ, ಆಡಳಿತದ ನಿರ್ಲಕ್ಷ್ಯವೇ ಇಂದು ಈ ನೀರಿನ ಸಂಕಷ್ಟಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.
ವೀರೇಶ ಚಲವಾದಿ ಮಾತನಾಡಿ, “ತಾಂಡಾದ ನೀರಿನ ಸಮಸ್ಯೆಯನ್ನು ಹಲವು ಬಾರಿ ಗ್ರಾಮಾಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರತಿ ಬಾರಿಯೂ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಈ ಸಮಸ್ಯೆ ಬಗೆ ಹರಿಸದಿದ್ದಲ್ಲಿ ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು” ಎಂದು ಎಚ್ಚರಿಸಿದರು.
ಗ್ರಾಮಾಭಿವೃದ್ಧಿ ಅಧಿಕಾರಿ (ಪಿಡಿಒ) ನಿರ್ಮಲ ತೋಟದ ಮಾತನಾಡಿ, “ತಾಂಡಾದ ನೀರಿನ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ” ಎಂದರು.
ಸುಮಾರು ಐವತ್ತು ವರ್ಷಗಳಿಂದ ಕ್ಯಾತನ ದೋಣಿ ತಾಂಡಾವು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿಯೇ ಉಳಿದಿದೆ. ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಒದಗಿಸಬೇಕಾದ ಸೌಕರ್ಯಗಳು ಬರೀ ಭರವಸೆಗಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಇಲ್ಲಿವರೆಗೆ ಒಂದೇ ಒಂದು ಅಭಿವೃದ್ಧಿ ಕಾಮಗಾರಿಯೂ ಜಾರಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ತಾಂಡಾಗಳಿದ್ದರೂ, ಅವುಗಳ ಸ್ಥಿತಿ ಒಂದೇ ರೀತಿಯಾಗಿದೆ. ನೀರು, ರಸ್ತೆ, ಸಾರ್ವಜನಿಕ ಕಟ್ಟಡಗಳ ಕೊರತೆ. ಶೀಘ್ರವೇ ದೇವಸ್ಥಾನಕ್ಕೆ ಅಗತ್ಯ ಸೌಕರ್ಯ, ಶುದ್ಧ ಕುಡಿಯುವ ನೀರು, ತಾಂಡಾಕ್ಕೆ ಸಮರ್ಪಕ ರಸ್ತೆ ಹಾಗೂ ಮೊಹರಂ ಆಚರಣೆಗೆ ಕಟ್ಟೆ ನಿರ್ಮಿಸಬೇಕೆಂದು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಅಡವಿ ಸೋಮನಾಳ ಪ್ರಮುಖ ರಸ್ತೆಯಿಂದ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದರೂ, ಅದು ತಗ್ಗು–ದಿಣ್ಣೆಗಳಾಗಿ ಮಾರ್ಪಟ್ಟಿದ್ದು ನಿತ್ಯ ಸಂಚಾರವೇ ಸವಾಲಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಅಪಾಯದ ದಾರಿಯಾಗಿ ಬದಲಾಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ತಕ್ಷಣ ಅಭಿವೃದ್ಧಿಪಡಿಸದಿದ್ದರೆ ತಾಂಡಾ ನಿವಾಸಿಗಳ ಸಂಕಷ್ಟ ಇನ್ನಷ್ಟು ತೀವ್ರವಾಗಲಿದೆ ಎಂಬ ಆತಂಕವೂ ಇದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಈ ದುರವಸ್ಥೆಗೆ ಕಾರಣವಾಗಿದ್ದು, ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ತಾಂಡಾದ ಜನರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮುದ್ದೇಬಿಹಾಳ | ಜಾತಿ ಪಿಡುಗು ತೊಲಗದ ಹೊರತು ದೇಶ ಸುಧಾರಿಸಲ್ಲ: ಎಸ್ ಎಸ್ ಅಂಗಡಿ
ಐವತ್ತು ವರ್ಷಗಳಾದರೂ ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಕ್ಯಾತನ ದೋಣಿಯಂತಹ ಹಲವು ತಾಂಡಾಗಳ ನಿವಾಸಿಗಳ ಬದುಕು ಪ್ರತಿದಿನವೂ ಹೋರಾಟವಾಗಿದೆ. ಇದು ಕೇವಲ ನೀರಿನ ಸಮಸ್ಯೆಗೆ ಸೀಮಿತವಲ್ಲ; ಆಡಳಿತ ವ್ಯವಸ್ಥೆಯ ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಇದು ಮಾನವೀಯ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆಯ ಪ್ರಶ್ನೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಈ ನಿರ್ಲಕ್ಷ್ಯವೇ ಮತ್ತಷ್ಟು ಸಂಕಷ್ಟಗಳಿಗೆ ಕಾರಣವಾಗಲಿದೆ. ತಾಂಡಾ ನಿವಾಸಿಗಳಿಗೆ ಗೌರವಯುತ ಜೀವನಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ಈಗ ಆಡಳಿತದ ಕರ್ತವ್ಯವಾಗಿದೆ.





