ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ, ಉಡುಪಿ, ಯುವ ರೆಡ್ ಕ್ರಾಸ್ ಘಟಕ (YRCU) ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ–I ಮತ್ತು II,2025–26ನೇ ಶೈಕ್ಷಣಿಕ ಸಾಲಿನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಡಾ. ಬಸ್ರೂರು ರಾಜೀವ್ ಶೆಟ್ಟಿ, (ಅಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ಶಾಖೆ ) ಉದ್ಘಾಟಿಸಿದರು .ಡಾ. ಗಣನಾಥ ಶೆಟ್ಟಿ ಎಕ್ಕರ್, (ರಾಜ್ಯ, ಮಾಜಿ ಎನ್ ಎಸ್ಎಸ್ ಅಧಿಕಾರಿ) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾಲೇಜಿನ ನಿರ್ದೇಶಕರು ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ., ಗೌರವಾತಿಥಿಯಾಗಿ ಹಾಜರಿದ್ದರು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುರೇಖಾ ಕೆ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವು ಪ್ರಾಂಜಲಿ ಅವರ ಪ್ರಾರ್ಥನೆಯಿಂದ ಆರಂಭವಾಗಿದ್ದು, ಉದ್ಘಾಟನಾ ಭಾಷಣದಲ್ಲಿ ಡಾ. ರಾಜೀವ್ ಶೆಟ್ಟಿ ರೆಡ್ ಕ್ರಾಸ್ ಚಳವಳಿಯ ಉದ್ಭವ, ಅದರ ವಿಸ್ತರಣೆ ಮತ್ತು ಜಾಗತಿಕ ಮಾನವೀಯ ಸೇವೆಗಳ ಕುರಿತು ವಿವರಿಸಿದರು. ರೆಡ್ ಕ್ರಾಸ್ನ ಏಳು ಮೌಲ್ಯಾಧಾರಿತ ತತ್ವಗಳು ಮಾನವತೆ, ಪಕ್ಷಪಾತರಹಿತತೆ, ತಟಸ್ಥತೆ, ಸ್ವಾಯತ್ತತೆ, ಸ್ವಯಂಸೇವಾ ಮನೋಭಾವ, ಏಕತೆ ಹಾಗೂ ವಿಶ್ವವ್ಯಾಪಕತೆ ಇವುಗಳ ಮಹತ್ವವನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದರು. ರೆಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡುನಾಂಟ್ ಅವರ ಸೇವಾ ತತ್ವಗಳನ್ನು ಅನುಸರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಮುಖ್ಯ ಅತಿಥಿ ಡಾ. ಗಣನಾಥ ಶೆಟ್ಟಿ ಎಕ್ಕರ್ ಮಾತನಾಡಿ, ವಿದ್ಯಾರ್ಥಿಗಳು ಪಾಠ್ಯಕ್ರಮದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಂತ ಅಗತ್ಯವೆಂದು ಹೇಳಿದರು. ರೆಡ್ ಕ್ರಾಸ್ ಹಾಗೂ ಎನ್ಎಸ್ಸೆಸ್ ಇತಿಹಾಸವನ್ನು ವಿವರಿಸಿ, ಮಾನವೀಯತೆ ಮತ್ತು ಸೇವೆಯ ಕುರಿತು ಅರ್ಥಪೂರ್ಣ ಕಥೆಯನ್ನು ಹಂಚಿಕೊಂಡರು.
ಯುವ ರೆಡ್ ಕ್ರಾಸ್ ಪ್ರತಿಜ್ಞಾ ವಿಧಿಯನ್ನು ಇದರ ಸಂಯೋನಾಧಿಕಾರಿ ಶ್ರೀ ಈರಪ್ಪ ಎಸ್. ಮೇದರ್ ಮತ್ತು ಎನ್ಎಸ್ಸೆಸ್ ಪ್ರತಿಜ್ಞೆ ವಿಧಿಯನ್ನು ಘಟಕದ ಸಂಯೋಜನಾಧಿಕಾರಿ ಡಾ. ನವೀನ್ ಚಂದ್ರ ಸಿ ಬಿ ಬೋಧಿಸಿದರು. ಎನ್ ಎಸ್ ಎಸ್ ಕಾರ್ಯದರ್ಶಿ ಸಮೀರ್ ಸರ್ವರನ್ನು ಸ್ವಾಗತಿಸಿ, ಯುವ ರೆಡ್ ಕ್ರಾಸ್ ಕಾರ್ಯದರ್ಶಿ ನವೀನ್ ನಾರಾಯಣ್ ವಂದಿಸಿದರು. ಚಂದ್ರಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಯುವ ರೆಡ್ ಕ್ರಾಸ್ ಮತ್ತು ಎನ್ ಎಸ್ ಎಸ್ ಘಟಕದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಲಾಗಿತ್ತು . ವಿಜೇತರಿಗೆ ಗೌರವಾನ್ವಿತ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಡಾ. ಪ್ರೀತಿ ಹರೀಶ್ ರಾಜ್, ಮಾನವಿಕ ವಿಭಾಗದ ಮುಖ್ಯಸ್ಥ ರೋಹಿತ್ ಆಮೀನ್, ಐಕ್ಯೂಎಸಿ ಸಂಯೋಜನ ಅಧಿಕಾರಿ ಡಾ. ಜಯಮೋಲ್ ಪಿಎಸ್ , ಎನ್ಎಸ್ಎಸ್ ಸಂಯೋಜನಾಧಿಕಾರಿ ಶ್ರೀ ಅಮೋಘ ಗಾಡ್ಕರ್ ಮತ್ತು ಇತರೆ ಬೊಧಕ ಮತ್ತು ಬೋಧಕೇತರ ವರ್ಗದವರು ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿಗಳಾದ ರಕ್ಷಿತಾ,ಅಂಕಿತ, ಸಂದೇಶ್ ಮತ್ತು ಯುವ ರೆಡ್ ಕ್ರಾಸ್ ಕಾರ್ಯದರ್ಶಿ ಶ್ರನ್ಯ ಉಪಸ್ಥಿತರಿದ್ದರು.





