ಉಡುಪಿ ಮತ್ತು ಕಾಸರಗೋಡು ನಡುವೆ 400 KV ವಿದ್ಯುತ್ ಲೈನ್ ಅಳವಡಿಕೆ ವಿರೋಧಿಸಿ, ಕಂಪನಿಯವರ ದುರ್ವರ್ತನೆ ಮತ್ತು ಜಿಲ್ಲಾಧಿಕಾರಿಯ ಅಸಂವಿಧಾನಿಕ ನಡೆಯನ್ನು ಖಂಡಿಸಿ ಇನ್ನಾ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು, ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಗ್ರಾಮ ಪಂಚಾಯತಿ ಎದುರು ನಾನಾ ಗ್ರಾಮಗಳ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. “ಈಗಾಗಲೇ ಇನ್ನಾ ಗ್ರಾಮದ ಮೂಲಕ ಹಾದು ಹೋಗಿರುವ ಉಡುಪಿ-ಹಾಸನ ವಿದ್ಯುತ್ ಮಾರ್ಗ ಮತ್ತು ಪಾದೂರು ತೈಲ ಸಂಗ್ರಹಾಗಾರದ ಪೈಪ್ ಲೈನ್ ಮಾರ್ಗದಿಂದಾಗಿ ಇನ್ನಾ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ, ಉಡುಪಿ-ಕಾಸರಗೋಡು ವಿದ್ಯುತ್ ಲೈನ್ಅನ್ನು ಅಳವಡಿಸುವುದು ಜನರ ಬದುಕನ್ನು ಕಸಿದುಕೊಳ್ಳಲಿದೆ” ಎಂದು ಆಕ್ರೋಶ ವ್ಯಕ್ತಪಿಸಿದ್ದಾರೆ.
“ಇನ್ನಾ ಮತ್ತು ಸುತ್ತಲಿನ ಗ್ರಾಮಗಳ ರೈತರು, ಕೃಷಿ ಕೂಲಿ ಕಾರ್ಮಿಕರು, ನಿತ್ಯ ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರವೇ ಇಲ್ಲವಾಗಿದೆ. ಈ ಯೋಜನೆಗಳಿಗೆ ಕೃಷಿ ಅವಲಂಬಿತ ಭೂ-ಮಾಲಿಕರಿಂದ ಬಲವಂತವಾಗಿ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ವಿದ್ಯುತ್ ಲೈನ್ನ ಸೆಳೆತದಿಂದ ಜನ-ಜಾನುವಾರುಗಳನ್ನು ಪ್ರಾಣ ಭಯದಿಂದ ಬದುಕುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈಗ ಉಡುಪಿ–ಕಾಸರಗೋಡು 400 KV ವಿದ್ಯುತ್ ಲೈನ್ ಅಳವಡಿಕೆಗಾಗಿ ಗ್ರಾಮಸ್ಥರ ತೀರ್ವ ವಿರೋಧದ ವ್ಯಕ್ತಪಡಿಸಿದ್ದಾರೆ. ಅನೇಕ ಬಾರಿ ಜಿಲ್ಲಾಧಿಕಾರಿಗೆ, ಜಿಲ್ಲೆಯ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಸರ್ಕಾರಕ್ಕೆ ರೈತರು ಮಾಡಿದ ಮನವಿ, ಹಕ್ಕೊತ್ತಾಯ ಸಲ್ಲಿಸಿದ್ದಾರೆ. ಆದರೂ, ಯೋಜನೆಯ ಗುತ್ತಿಗೆ ಪಡೆದಿರುವ ‘Udupi – Kasargod Power Transmission Ltd’ (UKTL) (Sterlite Company) ಅವರು ಯೋಜನೆಯಿಂದ ಭಾದಿತರಾಗುವ ಜನರಿಗೆ ಯಾವುದೇ ಪರಿಹಾರ ನೀಡದೆ, ಮಾಹಿತಿ ಕೊಡದೆ ಜೆಸಿಬಿಗಳ ಮೂಲಕ ಭೂಮಿಯನ್ನು ಅಗೆದಿದ್ದಾರೆ. ಅಗೆಯುವುದಕ್ಕೆ ತಡೆಯೊಡ್ಡಿದ ಮಹಿಳೆಯರು, ವೃದ್ಧರನ್ನೆಲ್ಲ ದೂಡಿ, ಭತ್ತದ ಬೆಳೆಗಾಗಿ ಸಿದ್ಧತೆಗೊಂಡ ಗದ್ದೆಗೆ ನುಗ್ಗಿ ದೊಡ್ಡ ದೊಡ್ಡ ಹೊಂಡಗಳನ್ನು ತೋಡಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ದುರ್ವತ್ರನೆ ತೋರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಜಿಲ್ಲಾಧಿಕಾರಿಯವರ ಲಿಖಿತ ಆದೇಶದ ಪ್ರತಿಯನ್ನು ತಹಶೀಲ್ದಾರರು ಮತ್ತು ಗುತ್ತಿಗೆದಾರರಲ್ಲಿ ಕೇಳಿದಾಗಲೂ, ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಈ ಯೋಜನೆ ಸಂಪೂರ್ಣ ಕಾನೂನು ಬಾಹಿರವಾಗಿ ಜಾರಿ ಮಾಡಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಜಿಲ್ಲಾಡಳಿತದ ಕಣ್ಣಮುಂದೆಯೇ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಮೌನವಾಗಿದ್ದಾರೆ. ಅವರ ನಡೆ ಖಂಡನೀಯವಾಗಿದೆ” ಎಂದು ಗ್ರಾಮಸ್ಥರು ದೂರಿದ್ದಾರೆ.
“ಕೃಷಿಯನ್ನೇ ನಂಬಿಕೊಂಡಿರುವ ರೈತರ ಫಲವತ್ತಾದ ಕೃಷಿ ಭೂಮಿ, ಅವರು ಬೆವರು ಸುರಿಸಿ ನೆಟ್ಟು ಬೆಳೆಸಿದ ತೆಂಗು, ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಮ್ಮ ನೆಲ-ಜಲ-ಪರಿಸರವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಮ್ಮ ಉಗ್ರ ಹೋರಾಟ ಅನಿವಾರ್ಯವಾಗಿದೆ” ಎಂದು ಹೋರಾಟಗಾರ ಸಮಿತಿ ಪ್ರತಿಭಟನೆಗೆ ಇಳಿದಿರುವುದಾಗಿ ತಿಳಿಸಿದರು.




